ರಜನೀಶ್‌‌ರ ಶೂನ್ಯ ನಾವೆ

[ಪತ್ರಕರ್ತರಾದ ನಾಗೇಂದ್ರ ತ್ರಾಸಿ ಬಹುಮುಖಿ ಬ್ಲಾಗ್ ತೆರೆದುಕೊಂಡಿದ್ದಾರೆ. ಅಲ್ಲಿ ಬರೆದ ಓಶೋ ಬಗೆಗಿನ ಸೊಗಸಾದ ಬರಹವನ್ನು ಅವರ ಅನುಮತಿಯೊಂದಿಗೆ ಇಲ್ಲಿ ಹಾಕಿದ್ದೇವೆ.]

ಓಶೋ ರಜನೀಶ್ ಮಾತು ಎಷ್ಟು ಸುಂದರವೋ, ಅವರ ತರ್ಕಬದ್ದವಾದ ಬರಹವೂ ಅಷ್ಟೇ ಆಪ್ತವಾಗುತ್ತವೆ. ಆದರೆ ರಜನೀಶ್ ಬಗ್ಗೆ ಒಂದು ವರ್ಗ ತೀವ್ರವಾಗಿ ವಿರೋಧಿಸುತ್ತದೆ, ಆತ ಸೆಕ್ಸ್ ಗುರು, ಲೈಂಗಿಕತೆ ಬಗ್ಗೆ ಮಾತನಾಡುತ್ತಾನೆ ಹೀಗೆ ಆರೋಪಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಆದರೆ ರಜನೀಶ್ ರಾಜಕಾರಣಿ, ಪಂಡಿತ, ಪುರೋಹಿತ, ಮುಲ್ಲಾ, ಪಾದ್ರಿ ಹೀಗೆ ಎಲ್ಲದರ ಬಗ್ಗೆಯೂ ಟೀಕಿಸಿ ಮಾತನಾಡಿದ್ದಾರೆ.

ಯಾವುದೇ ಕಟ್ಟುಪಾಡಿಗೆ ಒಳಗಾಗಿ ಮತಾಂಧರಂತೆ, ಒಂದು ವರ್ಗದ ವಕ್ತಾರರಂತೆ ಅವರು ಮಾತನಾಡಿಲ್ಲ ಆ ಕಾರಣಕ್ಕಾಗಿಯೇ ಅವರು ಇಷ್ಟವಾಗುತ್ತಾರೆ. ರಜನೀಶ್ ಚಾಂಗ್ ತ್ಸು ಅವರ ಹಿನ್ನೆಲೆಯನ್ನಿಟ್ಟುಕೊಂಡು ಮಾತನಾಡಿದ ಶೂನ್ಯ ನಾವೆಯಲ್ಲಿನ ಒಂದು ಅಂಶವನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಯಾಕೆಂದರೆ ರಜನೀಶ್ ಯಾವುದರ ಬಗ್ಗೆಯೇ ಮಾತನಾಡಲಿ, ಅದು ನಮ್ಮನ್ನು ಅಷ್ಟು ಆಕರ್ಷಿಸುತ್ತದೆ. ಇವತ್ತಿನ ಸ್ಥಿತಿಗತಿ, ನಮ್ಮ ಕಾರ್ಯದ ಒತ್ತಡ, ನಾವು ಆ ಸನ್ನಿವೇಶದ ನಡುವೆ ಸಿಕ್ಕಿಬೀಳುತ್ತಿರುವುದನ್ನು ನೋಡಿದರೆ, ರಜನೀಶ್ ಅವರು ಈ ಮಾತು ಸತ್ಯ ಎನ್ನಿಸುತ್ತದೆ….

ಅವರ ಪ್ರಕಾರ ಮನುಷ್ಯ ಅನುಪಯುಕ್ತನಾಗಿರಬೇಕು, ಅರೇ ಇದೇನಪ್ಪಾ, ಎಲ್ಲರೂ ಕ್ರಿಯಾಶೀಲರಾಗಿ ಅಂದರೆ ಈತ ರಜನೀಶರ ಅನುಪಯುಕ್ತರಾಗಿರಿಯನ್ನೇ ಬಹಳ ಖುಷಿಕೊಡುವ ವಿಚಾರ ಎಂದು ಬರೆಯುತ್ತಿದ್ದಾರಲ್ಲಪ್ಪ ಅಂತ ಹುಬ್ಬುಗಟ್ಟಿಕ್ಕಬೇಡಿ. ಅದನ್ನು ಅವರು ಒಂದು ಕಥೆಯ ಮೂಲಕ ವಿವರಿಸುತ್ತಾರೆ. ಒಂದು ನಗರದಲ್ಲಿನ ಯುವಕರನ್ನು ಬಲಾತ್ಕಾರವಾಗಿ ಸೇನೆಗೆ ಸೇರಿಸಲ್ಪಟ್ಟಿದ್ದರಂತೆ. ಏಕೆಂದರೆ ಅವರೆಲ್ಲರೂ ಉಪಯುಕ್ತರು. ಆದರೆ ಒಬ್ಬ ಗೂನು ಬೆನ್ನಿನವನನ್ನು ಮಾತ್ರ ಸೇರಿಸಿಕೊಂಡಿಲ್ಲ.

ಈತ ಅನುಪಯುಕ್ತ ಎಂದು ಬಿಟ್ಟುಬಿಟ್ಟಿದ್ದರು. ನೀವು ಗೂನು ಬೆನ್ನಿನವನಂತಿರಿ, ಏಕೆಂದರೆ ಇವರ ದೃಷ್ಟಿಯಲ್ಲಿ ಉಪಯುಕ್ತರು ಸದಾ ಗೊಂದಲಕ್ಕೆ ಒಳಗಾಗುವವರು. ಜಗತ್ತು ನಿಮ್ಮನ್ನು ಬಳಸಿಕೊಳ್ಳುವುದು, ಪ್ರತಿಯೊಬ್ಬರು ನಿಮ್ಮನ್ನು ಉಪಯೋಗಿಸಲು ಸಿದ್ದರಾಗಿರುವರು, ಹಸ್ತಕ್ಷೇಪ ಮಾಡುತ್ತಲೇ ಇರುತ್ತಾರೆ, ನಿಮ್ಮನ್ನಾಳಲು ಸದಾ ಸಿದ್ದರಾಗಿರುತ್ತಾರೆ. ನೀವು ಅಪ್ರಯೋಜಕರಾಗಿದ್ದಾಗ ನಿಮ್ಮನ್ನು ಜನ ಮರೆತೇ ಬಿಡುತ್ತಾರೆ.

ನಿಮ್ಮನ್ನು ನಿಮ್ಮ ಮೌನದಲ್ಲಿರಲು ಬಿಡುವರು. ಅವರು ನಿಮ್ಮ ಬಗ್ಗೆ ಚಿಂತೆ ಮಾಡುವುದಿಲ್ಲ. ಆ ಕಾರಣಕ್ಕಾಗಿಯೇ ರಜನೀಶ್ ಆ ಮಾತನ್ನು ಬಹಳ ಒತ್ತಿ ಹೇಳಿದ್ದಾರೆ. ಎಚ್ಚರಿಕೆಯಿಂದಿರಿ ಮತ್ತು ಬಲು ಉಪಯುಕ್ತರಾಗದಿರಿ. ಹೀಗಿರದಿದ್ದರೆ ಎಲ್ಲರೂ ನಿಮ್ಮನ್ನು ಶೋಷಣೆ ಮಾಡುವರು. ನಂತರ ಇವರು ನಿಮ್ಮನ್ನು ನಿರ್ವಹಿಸುವರು, ನಿಯಂತ್ರಿಸುವರು, ಮತ್ತಾಗ ನೀವು ಗೊಂದಲಕ್ಕೆ ಒಳಗಾಗುವಿರಿ.

ಯಾಕೆಂದರೆ ನೀವೀಗ ರಾಜಕೀಯದಲ್ಲಿನ ದೊಂಬರಾಟವನ್ನು ಗಮನಿಸಿ ರಜನೀಶ್ ಮಾತುಗಳು ಸತ್ಯ ಎನಿಸುತ್ತದೆ. ಅಲ್ಲಿ 20-30ವರ್ಷ ಕತ್ತೆ (? ) ದುಡಿದ ಹಾಗೇ ದುಡಿದು ತಮಗೆ ಉನ್ನತ ಹುದ್ದೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ, ಆದರೆ ಕೊನೆಗೆ ಅವರನ್ನು ಹೇಳದೇ ಕೇಳದೆ ಒಂದೋ (ಸಿಂಧ್ಯಾ ತರ, ಅವರೇನೂ ಬಿಎಸ್ಪಿಗಾಗಿ ಹೆಚ್ಚು ದುಡಿಯಲಿಲ್ಲ ಬಿಡಿ) ಮೂಲೆಗುಂಪು ಮಾಡುತ್ತಾರೆ, ಇಲ್ಲ ಕಿತ್ತೊಗೆಯುತ್ತಾರೆ.

ಜೆಡಿಎಸ್‌, ಕಾಂಗ್ರೆಸ್, ಬಿಜೆಪಿ ಹೀಗೆ ಮೂಲೆಗುಂಪು ಮಾಡಿದ ಉದಾಹರಣೆ ಬಹಳಷ್ಟಿದೆ. ಆದರೆ ನಿರುಪಯುಕ್ತತೆಯಲ್ಲಿ ಅದರದ್ದೇ ಆದ ಉಪಯುಕ್ತತತೆ ಇದೆ ಎಂಬುದು ರಜನೀಶ್ ಅಭಿಮತ. ಇದೊಂದು ಜೀವಂತ ಅಂಶ ನೀವಿದನ್ನು ಪೂರ್ಣವಾಗಿ ಬಿಟ್ಟು ಬಿಟ್ಟರೆ ಆಗ ಯಾವುದೂ ಸಹ ಉಪಯುಕ್ತವಲ್ಲ, ನಿಷ್ಪ್ರಯೋಜಕ ವಸ್ತುಗಳು ಇರುವುದರಿಂದಲೇ ಉಪಯುಕ್ತ ವಸ್ತುಗಳು ಇರುವುದು.ಆದರೆ ಜಗತ್ತಿನಲ್ಲಿ ಏನಾಗುತ್ತಿದೆ ನೋಡಿ, ವಿನೋದದ ಎಲ್ಲಾ ಚಟುವಟಿಕೆಗಳನ್ನೂ ನಾವು ಇಲ್ಲವಾಗಿಸಿದ್ದೇವೆ.

ಏಕೆಂದರೆ ನಮ್ಮ ಅನಿಸಿಕೆ, ಆಗ ನಮ್ಮಲ್ಲಿಯ ಶಕ್ತಿಯನ್ನು ಪೂರ್ತಿ ಉಪಯೋಗಕರವಾದುದಕ್ಕೆ ವಿನಿಯೋಗಿಸಬಹುದು ಎಂದು. ಆದರೆ ಕೆಲಸವಿಂದು ಬೇಸರ ತರುವಂತಾಗಿದೆ, ನಾವಿಂದು ವಿರುದ್ಧ ಧ್ರುವದೆಡೆಗೆ ಸಾಗಲೇಬೇಕಾಗಿದೆ…ನಿಮ್ಮ ಸುತ್ತಲಿನ ಯಶಸ್ವಿ ವ್ಯಕ್ತಿಗಳನ್ನು ನೋಡಿ, ರಾಜಕಾರಣಿಗಳು, ಧನವಂತರು, ಬೃಹತ್ ಕೈಗಾರಿಕೋದ್ಯಮಿಗಳನ್ನು ಏನಾಗುತ್ತಿದೆ ಅವರಿಗೆ? ಅವರು ಸಂಗ್ರಹಿಸಿರುವ ವಸ್ತುಗಳನ್ನು ನೋಡಬೇಡಿ, ನೇರವಾಗಿ ಅವರನ್ನು ನೋಡಿ.

ನೀವೇನಾದರು ಅವರ ಬಳಿ ಇರುವ ವಸ್ತುಗಳನ್ನು ನೋಡಿದರೆ ಮೋಸ ಹೋಗುವಿರಿ, ವಸ್ತುಗಳಿಗೆ ಅಲ್ಸರ್ ಬರುವುದಿಲ್ಲ, ಕಾರುಗ ಳಿಗೆ ಹೃದಯಾಘಾತವಾಗುವುದಿಲ್ಲ, ಮನೆಗಳನ್ನು ಆಸ್ಪತ್ರೆಗೆ ಸೇರಿಸುವುದಿಲ್ಲ. ಅದಕ್ಕೆ ನೀವು ವಸ್ತುಗಳನ್ನು ನೋಡಬೇಡಿ ಎನ್ನುವ ರಜನೀಶ್, ಈ ವಸ್ತುಗಳ ಮಧ್ಯೆ ಇರುವ ಮನುಷ್ಯನನ್ನು ನೋಡಿ ಎಂದೆನ್ನುತ್ತಾರೆ, ಯಾಕೆಂದರೆ ಆಗ ನಿಮಗೆ ಕಾಣುವುದು ಆತನ ಮತ್ಸರ, ಬಡತನ, ಮುಖವಾಡದ ಬದುಕು, ಆಗ ಭಿಕ್ಷುಕ ಕೂಡ ಈತನಿಗಿಂತ ಮೇಲಾಗಿ ಕಾಣಿಸುತ್ತಾನೆ. ಈತನಿಗಿಂತ ಶ್ರೀಮಂತ ಆತನಾಗುತ್ತಾನೆ. ಬಡವನ ಜೀವನ ಶ್ರೀಮಂತನ ಜೀವನಕ್ಕಿಂತ ಶ್ರೀಮಂತವಾಗಿರುತ್ತದೆ…. ಈಗ ಹೇಳಿ ರಜನೀಶ್ ಮಾತು ಎಲ್ಲೋ ಒಂದೆಡೆ ನಿಜವೆನಿಸುವುದಿಲ್ಲವೇ……

ಹಕ್ಕಿಯ ರೆಕ್ಕೆಯ ಚಿತ್ತಾರ

‘ಓಶೋ ಬಗ್ಗೆ ಅಷ್ಟಿಷ್ಟಾದರೂ ಬರೀಬಹುದೇನೋ. ಆದ್ರೆ ವಿವೇಕಾನಂದರ ಬಗ್ಗೆ ಅಂತೂ ಚೂರೂ ಬರೆಯೋಕೆ ಆಗೋದಿಲ್ಲ ಕಣೋ’, ಅಂದಿದ್ರು ಅಕ್ಕ ಚೇತನಾ.
ಈಗ ನಾನು ಯೋಚಿಸಿದೆ, ಅದೇಕೆ ಓಶೋ ಬಗ್ಗೆ ಬರೆಯೋಕೆ ಸಾಧ್ಯವಾಗುತ್ತಿಲ್ಲ ಅಂತ. ಕಲ್ಲು ಸಕ್ಕರೆಯನ್ನು ಬಾಯೊಳಗೆ ಹಾಕಿಕೊಂಡಾಗ ಅದನ್ನು ನಾಲಿಗೆಯ ಮೇಲೆ ಹೊರಳಾಡಿಸಿ, ಮೆಲುವಾಗಿ ನಲುಗಿಸಿ, ಕರಗಿಸಿ ಸವಿಯುವುದರಲ್ಲಿ ಮಗ್ನನಾಗುವುದರ ಬದಲು ಅದರ ರನ್ನಿಂಗ್ ಕಾಮೆಂಟರಿಯನ್ನು ಕೊಡುತ್ತಾ ಕೂರಲು ಸಾಧ್ಯವಾಗುತ್ತದೆಯೇ ಅನ್ನಿಸಿತು. ಆದರೂ ಒಮ್ಮೆ ತಿಂದು ಮುಗಿಸಿದ ಕಲ್ಲು ಸಕ್ಕರೆಯ ಸಿಹಿಯ ನೆನಪಿನ ಸೆರಗಿನಲ್ಲೇ ಒಂದಷ್ಟು ಸಿಹಿಯಾದ ಮಾತುಗಳನ್ನಾಡಿಬಿಡಬೇಕು ಅನ್ನಿಸುತ್ತದೆ. ಇನ್ನು ಮುಂದೆ ಓಶೋ ಎಂಬ ಹಕ್ಕಿಯ ಬಣ್ಣ ಬಣ್ಣದ ಪುಕ್ಕಗಳ ಚಿತ್ತಾರ ಈ ಬ್ಲಾಗಿನಲ್ಲಿ ಮೈದೋರಲಿದೆ.

ಓಶೋ ನನಗೇಕಿಷ್ಟ?

[ಓಶೋನ ಬಗೆಗೆ ಯಾರಿಗೆ ಯಾವ ಭಾವನೆಯಾದರೂ ಇರಬಹುದು. ಸಮುದ್ರದ ದಡದಲ್ಲಿ ನಿಂತು ನಾವು ನೀರಿನ ಬಗ್ಗೆ ಭಾವನೆ ತಳೆಯುವಂತೆಯೇ ಇದು. ಆದರೂ ನಾವು ಮಾಡಬಹುದಾದದ್ದು ಅಷ್ಟೇ. ಅಕ್ಷರವಿಹಾರ ಎಂಬ ಬ್ಲಾಗಿನಲ್ಲಿ ವಿಹರಿಸುವ ವಿನಾಯಕ ಕೋಡ್ಸರ ತಮಗೆ ಓಶೋ ಯಾಕಿಷ್ಟ ಎಂದು ಬರೆದುಕೊಂಡಿದ್ದಾರೆ. ಅದು ಇಲ್ಲಿ ಓಶೋ ಬ್ಲಾಗಿನಲ್ಲಿ ಮರುಪ್ರಕಟವಾಗಿದೆ.]

“ಅವ ಕಂಡ ಕಂಡ ಹೆಣ್ಣುಮಕ್ಕಳ ಜೊತೆ ಮಲಗುತ್ತಿದ್ದನಂತೆ. ಭಕ್ತರನ್ನು ವಶೀಕರಿಸಲು ಏನೇನೋ ಬಳಸುತ್ತಿದ್ದನಂತೆ. ಗಾಂಜಾ ಮೊದಲಾದ ಮಾದಕ ವಸ್ತುವನ್ನು ಉಪಯೋಗಿಸುತ್ತಿದ್ದನಂತೆ. ಆದರೂ ಸಂನ್ಯಾಸಿಯಂತೆ!” ಅನ್ನೋ ಎಲ್ಲಾ ಅಂತೆಕಂತೆಗಳಿರುವುದು ಓಶೋ ರಜನೀಶನ ಕುರಿತಾಗಿ. ನಾನಂತೂ ಓಶೋವನ್ನೇ ಕಾಣಲಿಲ್ಲ. ಇನ್ನೂ ಅವನ ಚಟುವಟಿಕೆಗಳನ್ನು ಕಾಣುವುದೆಂತು? ಅದೆಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ ಓಶೋ ಕುರಿತಾಗಿ ಸಾಕಷ್ಟು ಅಪಸ್ವರವಿದೆ. ಅವನನ್ನು ಸಂತ, ಸಾಧು, ಸಾಧಕ ಎಂಬುದನ್ನು ಎಷ್ಟೋ ಜನ ಒಪ್ಪುವುದಿಲ್ಲ. ಒಪ್ಪಬೇಕು ಅಂತಾನೂ ಅವ ಹೇಳಿಲ್ಲ!
ಅಂತಹ ಓಶೋ ನನಗೆ ಪರಿಚಿತವಾಗಿದ್ದು ನಾಲ್ಕು ವರ್ಷದ ಕೆಳಗೆ ಸ್ತ್ರೀ ಮುಕ್ತಿ-ಹೊಸದೊಂದು ದೃಷ್ಟಿಕೋನ ಎಂಬೊಂದು ಅದ್ಬುತ ಪುಸ್ತಕದಿಂದ. ಗೆಳೆಯ ಅವಧಾನಿಗಳು ಪರಿಚಯಿಸಿಕೊಟ್ಟ ಪುಸ್ತಕವದು. ವೈಚಾರಿಕವಾದ ಸೆಕ್ಸ್ ಪುಸ್ತಕ ಅಂತಾನೇ ಅದನ್ನು ಕರೆಯಬಹುದು. ಸ್ತ್ರೀ ಬದುಕಿನ ಬಗೆಗೆಗೊಂದು ವಿಭಿನ್ನ ಆಯಾಮ ಕಲ್ಪಿಸಿಕೊಡುವ, ಸೆಕ್ಸ್ ಕುರಿತಾಗೊಂದು ವಿಚಿತ್ರ ಬಗೆಯ ಪರಿಕಲ್ಪನೆಯನ್ನು ಕಟ್ಟಿಕೊಡುವ ಪುಸ್ತಕ. “ಮನುಷ್ಯ ಯಾರನ್ನಾದರೂ ಅನುಭೋಗಿಸಬೇಕು ಅನ್ನಿಸಿದರೆ ಅನುಭವಿಸಬಿಡಬೇಕು. ತನ್ನೊಳಗಿನ ತೃಷೆಯನ್ನು, ಆಸೆಯನ್ನು ಕಟ್ಟಿಕೊಂಡಿರಬಾರದು” ಅನ್ನುತಾರೆ ಓಶೋ(ಸೆಕ್ಸ್ ವಿಚಾರದಲ್ಲಿ ಒಂತರಹ ದನಗಳ ತರಹವೇ ಬದುಕಬೇಕೆಂಬ ದಾಟಿಯ ಮಾತುಗಳವು!) ನನಗೇನೋ ಅನುಭವಿಸಬೇಕೆಂದಿದೆ ಆದರೆ ಆಕೆಗೆ ಇರಬೇಕಲ್ಲ? ಅಂತಹ ಭೋಗ ಬಲಾತ್ಕಾರವಾಗದೇ ಅಂದರೆ? ಅವಳ ಸಮ್ಮತಿಯಿಲ್ಲದಿದ್ದರೆ, ಅವಳಿಗೆ ಭೋಗದಲ್ಲಿ ಆಸಕ್ತಿಯಿರದಿದ್ದರೆ ನೀವು ಮೈಮೇಲೆ ಬಿದ್ದು ಅವಳಿಗೆ ಹಪಹಪಿಸುವುದು ವ್ಯರ್ಥ. ಅವಳಿಂದ ನಿಮಗೆ ನೈಜ ಸುಖದ ಅನುಭವವೇ ಸಿಗುವುದಿಲ್ಲ ಎಂಬುದು ಅವರ ವಾದ. ಇದ್ದರೂ ಇರಬಹುದು ನನಗಂತೂ ಸದ್ಯಕ್ಕೆ ಅದರ ಅನುಭವವಿಲ್ಲ!
ಅಲ್ಲಿಂದಲೇ ಪರಿಚಯವಾದದ್ದು ಓಶೋ ಎಂಬೋರ್ವ ಚಿಂತಕ. ಓಶೋ ಅಂತಹ ಪುಸ್ತಕಗಳನ್ನು ಓದಿದಾಗ ಆತನ ಮೇಲಿರುವ ಆಪಾದನೆಗಳೆಲ್ಲಾ ನಿಜವೇನೋ ಅನ್ನಿಸತ್ತೆ(ಇಲ್ಲದಿದ್ದರೂ ಅದು ನಿಜವೇ ಅನ್ನುತ್ತಾರೆ ಹೆಚ್ಚಿನ ಮಂದಿ!)ಆದರೆ ಅವನ ಚಿಂತನೆಯ ವೋಗ ಅಲ್ಲಿಗೆ ನಿಲ್ಲುವುದಿಲ್ಲ. ನಾನು ಇದುವರೆಗೆ ಓದಿದ ಓಶೋ ಬರೆದ ಪುಸ್ತಕಗಳಲ್ಲಿ ಅದ್ಬುತವಾದ ಪುಸ್ತಕ”ಭಜಗೋವಿಂದಂ ಮೂಢಮತೆ”. ಊಹುಂ ಓಶೋ ವೈಚಾರಿಕತನವನ್ನು ಊಹಿಸಲು ಸಾಧ್ಯವಿಲ್ಲ. ಸೆಕ್ಸ್ ಮೊದಲಾದ ಸಮಾಜದಲ್ಲಿನ ಒಂತರಹ ನಿರ್ಬಂಧಿತ ವಿಚಾರದ ಕುರಿತಾಗಿ ಮಾತಾಡುವ ಓರ್ವ ಆಧ್ಯಾತ್ಮದ ಕುರಿತಾಗಿಯೂ ಅಷ್ಟೇ ಫ್ರೌಡವಾಗಿ ಮಾತಾಡಬಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ. ಆ ಪರಿ ಉನ್ನತವಾದ ಪುಸ್ತಕವದು. ನಾನು ಓಶೋವನ್ನು ಇಷ್ಟಪಡುವುದು ಅಂತಹ ಚಿಂತನೆಗಳಿಗಾಗಿಯೇ.
ಒಪ್ಪಲು ಸಾಧ್ಯವಿಲ್ಲ, ಆಡುವ ಮಾತೊಂದು ಮಾಡುವ ಕೃತಿ ಇನ್ನೊಂದು ಎಂಬ ಕೆಟಗರಿಯ ಮಂದಿಯನ್ನು ನಾವು ಸ್ವೀಕರಿಸಲು ಸಾಧ್ಯವೇ ಇಲ್ಲ. ಹೌದು ನನಗೆ ಓಶೋ ಇಷ್ಟವಾಗುವುದು ಹಾಗಾಗಿಯೇ. ಅವ ಆಧ್ಯಾತ್ಮದ ನಡುವೆ ಕುರುಡು ಕಟ್ಟಲೆಗಳನ್ನು ತೂರಿಸಲಿಲ್ಲ. ಎಲ್ಲವನ್ನು ಮುಕ್ತವಾಗಿಯೇ ಮಾತನಾಡಿದ. ನಮ್ಮಲ್ಲಿ ಹಲವು ಸಂನ್ಯಾಸಿಗಳಿದ್ದಾರೆ. ಅವರಲ್ಲಿ ಕೆಲವರು ಅನೈತಿಕ ಸಂಬಂಧ ಹೊಂದಿರುವುದರ ಕುರಿತು ಸಾಕಷ್ಟು ಗುಸುಗುಸುವಿದೆ. ಮುಲ್ಲಾಗಳಿದ್ದಾರೆ, ಫಾದರ್‌ಗಳಿದ್ದಾರೆ. ಅವರಲ್ಲಿ ಸಾಕಷ್ಟು ಜನ ಮಾಡಬಾರದ ಹಲ್ಕಾ ಕೆಲಸಗಳನೆಲ್ಲಾ ಮಾಡಿ ಮುಗಿಸಿ ಚರ್ಚ್, ಮಸೀದಿಗೆ ಬಂದು ಒಳ್ಳೆಯ ಉಪದೇಶ ನೀಡುತ್ತಾರೆ! ಎಂದು ಜನ ಮಾತಾಡುವುದನ್ನು ಕೇಳಿದ್ದೇವೆ. ಅರ್ಥಾತ್ ಸೆಕ್ಸ್‌ನಂತಹ ದೇಹಸಹಜವಾದ ಅಭಿರುಚಿಯನ್ನು ತ್ಯಾಗ ಮಾಡುವುದು ಅಷ್ಟು ಸುಲಭದ ಕಾಯಕವಲ್ಲ. ಅದನ್ನು ತ್ಯಾಗಮಾಡಿದ್ದೇವೆ. ನಾವು ಮಹಾನ್ ತ್ಯಾಗಿಗಳು ಎಂಬ ಮುಖವಾಡ ಧರಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ನನಗನ್ನಿಸುತ್ತದೆ. ಹಾಗಾಗಿಯೇ ನಾನು ಓಶೋವನ್ನು ಇಷ್ಟಪಡುತ್ತೇನೆ.
ಸೆಕ್ಸ್ ಮನುಷ್ಯನನ್ನು ಯಾವ ಪರಿ ಕಾಡುತ್ತದೆ ಎಂಬೊಂದನ್ನು ಬೈರಪ್ಪನಪ್ಪವರು “ಮಂದ್ರಾ”ದಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಅದನ್ನು ಓದುವಾಗ ಅದೊಂದು ಕೆಟ್ಟ ಕಾದಂಬರಿ ಅನ್ನಿಸತ್ತೆ. ಆದರೆ ಅದನ್ನು ಓದಿ ಸಮಾಜವನ್ನು ನೋಡುವಾಗ ಅದು ವಾಸ್ತವ ಎಂಬ ಅರಿವಾಗತ್ತೆ. ಇನ್ನೂ ಸೆಕ್ಸ್‌ ಎಂಬುದು ಸಂನ್ಯಾಸಿಗಳನ್ನು ಹೇಗೆ ಕಾಡತ್ತೆ ಎಂಬುದನ್ನು ಶಿವರಾಮಕಾರಂತರು “ಕೇವಲ ಮನುಷ್ಯರು” ಕಾದಂಬರಿಯಲ್ಲಿ ಕೆತ್ತಿದ್ದಾರೆ! ಕಪಟ ಸಂನ್ಯಾಸಿಗಳ ಮುಖವಾಡ ಕಳಚಿಟ್ಟಿದ್ದಾರೆ. ಒಳಗೊಂದು ಹೊರಗೊಂದು ಎಂಬ ಆ ಎಲ್ಲಾ ಮರೀಚಿಕೆಯಿಂದ ಓಶೋ ಹೊರನಿಲ್ಲುತ್ತಾರೆ ಅಲ್ಲವೇ?
ಹಾಗಂತ ಓಶೋ ಭೊಗವನ್ನೇ ಪ್ರೋತ್ಸಾಹಿಸಿದರು ಎಂಬುದನ್ನು ನಾನಂತೂ ಒಪ್ಪುವುದಿಲ್ಲ. ಭೊಗಕ್ಕೆ ಕಡಿವಾಣ ಹಾಕಲಿಲ್ಲ. ಕಟ್ಟಲೆ ವಿಧಿಸಲಿಲ್ಲ ಅಷ್ಟೆ. ಭಾರತ ಭೊಗಭೂಮಿಯಲ್ಲ ತ್ಯಾಗಭೂಮಿ ಎಂಬುದನ್ನು ಓಶೋ ಕಣಕಣಗಳಲ್ಲೂ ನಿರೂಪಿಸಿದ್ದಾರೆ. ಬಿಕ್ಷು ರಾಜನಾಗುವುದನ್ನು ಕೇಳಿದ್ದೇವೆ. ಆದರೆ ರಾಜ ಸ್ವಪ್ರೇರಣೆಯಿಂದ ಬಿಕ್ಷುವಾಗುವ ಉದಾಹರಣೆ ಎಲ್ಲಾದರೂ ಇದೆಯಾ? ಇದೆ ಅದು ಭಾರತದಲ್ಲಿ ಮಾತ್ರ ಸಾಧ್ಯವಿದೆ. ರಾಜನಾಗಿದ್ದ ಗೌತಮ ಬುದ್ದನಾದ.  ಬಿಕ್ಷುವಾದ. ಮಹಾವೀರ ಕೂಡಾ ಹಾಗೇ. ಇಂಥ ಅದ್ಬುತ ತ್ಯಾಗ, ಜಗತ್ತಿನಲ್ಲಿ ಬೇರೆಲ್ಲಿದೆ? ಎನ್ನುತ್ತಾರೆ ಓಶೋ. ಸಂತ ಏಕನಾಥರ ತ್ಯಾಗದ ಕುರಿತಾಗಿ ಮಾತನಾಡುತ್ತಾರೆ. ಹಾಗೇ ಮೀರಾಳ ಪ್ರೇಮದ ಕುರಿತಾಗಿಯೂ ಮಾತನಾಡುತ್ತಾರೇ! ಸಂಭೋಗದಿಂದ ಸಮಾಧಿ ತಲುಪುವುದನ್ನೂ ವಿವರಿಸುತ್ತಾರೆ. ಭೋಗಿಗಳಿಗೆ ಭೋಗದಿಂದಲೇ ಧ್ಯಾನ ಸ್ಥಿತಿ ತಲುಪುವುದನ್ನು ಹೇಳುತ್ತಾರೆ. ತ್ಯಾಗಿಗಳಿಗೆ ಬುದ್ದ, ಮಹಾವೀರರ ಹಾದಿ ತೋರಿಸುತ್ತಾರೆ. ಎಂತಹ ಅದ್ಬುತ ಅಲ್ವಾ?
ಹೌದು ಓಶೋ ಎಂದರೆ ನನ್ನ ದೃಷ್ಟಿಯಲ್ಲಿ ಕೇವಲ ಮನುಷ್ಯನಲ್ಲ ಅಥವಾ ಸಾಧುವೂ ಅಲ್ಲ. ಅದೊಂದು ಪ್ರತಿಭೆ. ಅದ್ಬುತವಾದೊಂದು ಶಕ್ತಿ. ವಿಚಾರ ಭಂಡಾರ. ಹಾಗಾಗಿ ನಾವು ಆತನನ್ನು ವೈಚಾರಿಕವಾಗಿಯೇ ಸ್ವೀಕರಿಸೋಣ. ಮನುಷ್ಯನ ಬದುಕಿರುವುದು ೧೦೦ ವರ್ಷ. ಅಂತಹ ಬದುಕಿನಲ್ಲಿ ನೀನು ಅದು ಮಾಡಬೇಡ, ಇದನ್ನು ನೋಡಬೇಡ ಎಂದು ಕಟ್ಟುಪಾಡು ವಿಧಿಸುವ ಹಕ್ಕು ಯಾರಿಗೂ ಇಲ್ಲ. ಆದರ್ಶಗಳು ಮನಸಿಗೆ ಆನಂದವನ್ನುಂಟುಮಾಡಬೇಕೇ ಹೊರತು ಅದೊಂದು ಬಂಧನವಾಗಬಾರದು. ನೀನು ನಿನ್ನ ಕೊಣೆಯೊಳಗೆ ಏನಾದರೂ ಮಾಡಿಕೋ. ಅದನ್ನು ಸಮಾಜಕ್ಕೆ ತರಬೇಡ. ನಿನ್ನ ರೋಗಗಳನ್ನೆಲ್ಲಾ ಸಮಾಜಕ್ಕೆ ಅಂಟಿಸಬೇಡ ಎಂದಷ್ಟೇ ಹೇಳಬಹುದು ಹೊರತೂ ಒಬ್ಬ ಇನ್ನೊಬ್ಬನಿಗೆ ಆಜ್ಞೆ ಮಾಡುವ ಹಕ್ಕಿಲ್ಲ. ಹಾಗೆ ಮಾಡಿದರೆ ಒಬ್ಬನ ಸುಂದರವಾದ ಬದುಕನ್ನು ನೀವು ಕಸಿದುಕೊಂಡಂತೆ ಎಂಬುದು ನನ್ನ ನಿಲುವು. ಹಾಗಾಗಿಯೇ ನನಗೆ ಓಶೋ ತುಂಬಾ ಇಷ್ಟವಾಗುವುದು. ಓಶೋ ಕುರಿತು ಆಡಿದಷ್ಟು ಇದೆ ಆದರೆ ಸದ್ಯಕ್ಕೆ ಇಷ್ಟು ಸಾಕು.

ಒಂದು ಪತ್ರ

This blog violates the whole central essence of what Osho taught. The reasons are the following.
Osho taught that - Try to understand yourself by deep awareness and meditation, the other is a mirror, but you are the focus. Don’t focus on the other, but focus on yourself, be aware, be the centre of yourself. This is the central essence of his teachings.

Now, admittedly not wrong, in this blog we are trying to understand Osho and on a subtle level trying to give a “conduct certificate” to Osho.

Below are few facts that I hope you all agree.

Neither of us (barring the exceptions) have seen Osho directly, nor did we ever interact with Osho. All our ideas/impressions about Osho are given by various media and partly by his own books. Based on that we are trying to UNDERSTAND/JUDGE Osho. This sounds absolutely funny, although, not unnatural.

Sex is not an issue, conduct is not an issue, morality is not an issue. Just by meditation and deep awareness one can transcend all the above.
During night we need independent lights to every room, however, during day time we just need to open the windows so that the Sun light naturally illuminates the entire house.
So, the essence is to lit up the central awareness (keendra prajne) and that will eradicate all other local dark sites.

Now, according to me, It won’t help if we try to understand Osho’s personality or his weaknesses or strengths. What may be of central importance is - among all his teachings/sayings, how much we comprehend or how much we understand or how much it makes sense for us?.

Now the main question posed by Supreeth was - Should we not question great souls?.
We can definitely question, however, The ocean might be infinite, but when we make our palms together, the amount of water we can hold with our palms is finite (depending upon the size of our palms).
Sun light has all sorts of radiation, however, how much we see depends upon the sensitivity of our eyes. Let us not get decieved by our eyes and claim that - there is no infrared radiation in this world.

Regards
Dr.D.M.Sagar

ಮೌನದ ಪಾವಿತ್ರ್ಯತೆ ಹಾಗೂ ಮಾತಿನ ಅನಿವಾರ್ಯತೆ!

ಓಶೋ ಭಾರತೀಯತೆಯನ್ನು ವಿದೇಶಿಯರಿಗೆ ಆಕರ್ಷವಾಗಿ ತಲುಪಿಸಿ ಅದರಿಂದ ಆರ್ಥಿಕ ಫಾಯಿದೆಯನ್ನು ಪಡೆದ ಅಪ್ಪಟ ಬಿಸಿನೆಸ್ ಮ್ಯಾನ್ ಆಗಿದ್ದನೇ? ಎಂಬ ಬಗ್ಗೆ ನಡೆಯುತ್ತಿದ್ದ ಚರ್ಚೆಯಲ್ಲಿ ಸಂತೋಷ್ ಒಂದು ಸಂಗತಿಯನ್ನು ಪ್ರಸ್ತಾಪಿಸಿದರು. ಅವರ ಮಾತುಗಳಲ್ಲೇ ಅದನ್ನು ಇಲ್ಲಿ ಕೊಟ್ಟಿರುವೆ:

ಸಾಧಿಸಿದವರ ಬಗ್ಗೆ ಮತ್ತೊಬ್ಬ ಸಾಧಕ ಪ್ರಶ್ನಿಸಬಹುದೇನೋ… ಆದರೆ ಅಧ್ಯಾತ್ಮದಲ್ಲಿ ಏನು ಸಾಧನೆ ಮಾಡದೆ ಅಲ್ಲಿಂದ .. ಇಲ್ಲಿಂದ ಒಂದಷ್ಟನ್ನು ಹೆಕ್ಕಿ, ಅದರ ಆಧಾರದ ಮೇಲೆ ಸಾಧಕನೋರ್ವನ ಸಾಧನೆಯ ಬಗ್ಗೆ ನಾವು-ನೀವು ಮಾತನಾಡುವುದು, ವಿಶ್ಲೇಷಿಸುವುದು ಅಷ್ಟು ಸಮಂಜಸ ಅಂತ ಅನಿಸುವುದಿಲ್ಲ. ಹಾಗಿದ್ದಲ್ಲಿ ಓಶೊನಂತೆ ನಾವ್ಯಾಕೆ ಆಗಲಿಲ್ಲ ? ಉರಿದ್ದಲ್ಲಿ ಕೊಳಗೇರಿ ಇದ್ದೇ ಇರುತ್ತದೆ. ಹಾಗಂತ ಇಡೀ ಉರನ್ನೇ ಕೊಳಗೇರಿ ಅನ್ನಲು ಸಾಧ್ಯವೇ ? ಭಾರತ ಇಂದು ಏನೇ ಆಗಿರಬಹುದು. ಅಧ್ಯಾತ್ಮ ಅದರ ‘ಆತ್ಮ’ ಅದೇ ರೀತಿ ಅಧ್ಯಾತ್ಮ ಜಗತ್ತಿನ ಬೆನ್ನೆಲುಬು. ಜಗತ್ತು ನಿಂತಿರುವುದೇ ಈ ಬೆನ್ನೆಲುಬಿನ ಮೇಲೆ. ಆದ್ದರಿಂದ ನಾವು ಈ ದಿಸೆಯಲ್ಲಿ ಪಯಣಿಸಿದವರನ್ನು ಟೀಕಿಸುವ ಬದಲು ಸಾಧಕನ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದು ಸರಿಯಲ್ಲವೇ. ಇಲ್ಲ , ಟೀಕೆ ಮಾಡಲೇ ಬೇಕಿದ್ದರೆ ನಾವು ಆ ದಿಸೆಯಲ್ಲಿ ಸಾಧಿಸಿ ಟೀಕಿಸುವುದು ಉತ್ತಮ ಬೆಳವಣಿಗೆ. ವಿತಂಡವಾದಕ್ಕೆ ಅರ್ಥವಿಲ್ಲ. ‘ಅಧ್ಯಾತ್ಮ’ ಎನ್ನುವುದು ನಮ್ಮ ನಿತ್ಯ ಬದುಕಿನ ಒಂದು ಅವಿಭಾಜ್ಯ ಅಂಗ. ಅದರ ಒಳ ತಿರುಳನ್ನು ಅರಿಯುತ್ತಾ ಹೋಗುವುದನ್ನು ಸಾಧನೆಯ ಪಥ ಅಂತ ಹೇಳಬಹುದೋ ಏನೋ ? ಒಟ್ಟಿನಲ್ಲಿ ನಮ್ಮ ಧರ್ಮವನ್ನು ಪ್ರಚುರಗೊಳಿಸುವಲ್ಲಿ ನಾವು ತೆಗೆದುಕೊಳ್ಳುವ ಹೆಜ್ಜೆಗಳು ಟೀಕೆಗಳಿಗೆ ದಾರಿ ಮಾಡಿಕೊಡುತ್ತವೆ. ಹಾಗಂತ ಮಾಡಡಿರಲು ಸಾಧ್ಯವೇ ?

ಅವರ ಅಭಿಪ್ರಾಯದಲ್ಲಿ ನನಗೆ ಕುತೂಹಲಕರವಾಗಿ ಕಂಡ ಸಂಗತಿ: ಸಾಧಿಸಿದವರ ಬಗ್ಗೆ ಮತ್ತೊಬ್ಬ ಸಾಧಕ ಪ್ರಶ್ನಿಸಬಹುದೇನೋ… ಸಾಧಕನೋರ್ವನ ಸಾಧನೆಯ ಬಗ್ಗೆ ನಾವು-ನೀವು ಮಾತನಾಡುವುದು, ವಿಶ್ಲೇಷಿಸುವುದು ಅಷ್ಟು ಸಮಂಜಸ ಅನ್ನಿಸುವುದಿಲ್ಲ.

ಅವರ ಈ ಅಭಿಪ್ರಾಯವನ್ನು ಓದಿ ನನಗೆ ಒಂದು ಕ್ಷಣ ಹಾಗಾದರೆ ಈ ಬ್ಲಾಗಿನ ಉದ್ದೇಶವೇ ಅಸಮಂಜಸ ಅಲ್ಲವೇ ಎಂದು ಅವರು ಪ್ರಶ್ನಿಸಿದ ಹಾಗಾಯಿತು. ಒಬ್ಬ ಸಾಧಕನ ಬಗ್ಗೆ ಮಾತಾಡಲಿಕ್ಕೆ ಆತನ ಹಾಗೆಯೇ ಸಾಧನೆಯನ್ನು ಮಾಡಿದ ಮತ್ತೊಬ್ಬ ವ್ಯಕ್ತಿಗೆ ಮಾತ್ರ ಸಾಧ್ಯ. ನ್ಯೂಕ್ಲಿಯಾರ್ ಫಿಸಿಕ್ಸಿನಲ್ಲಿ ನಡೆದ ಸಂಶೋಧನೆಯೊಂದನ್ನು ವಿಶ್ಲೇಷಿಸಿ ಮಾತಾಡಲು ವಿಜ್ಞಾನದ ‘ಓಂ’ಕಾರವೂ ತಿಳಿದ ಪತ್ರಕರ್ತ ನಿಂತರೆ? ಅದನ್ನು ವಿಶ್ಲೇಷಿಸಲು ಮತ್ತೊಬ್ಬ ನ್ಯೂಕ್ಲಿಯರ್ ಫಿಸಿಸಿಸ್ಟೇ ಸಮರ್ಥನಾದವನು. ದೇಶದ ವಿದೇಶಾಂಗ ನೀತಿಗಳ ಬಗ್ಗೆ ಹೈಸ್ಕೂಲು ಹುಡುಗನೊಬ್ಬ ಟೀಕೆ ಟಿಪ್ಪಣಿ ಮಾಡುವುದು ಎಷ್ಟು ಅಪ್ರಬುದ್ಧವೋ ಹಾಗೆಯೇ ನಾವು ಸಾಧಕರ ಬಗ್ಗೆ ಮಾತನಾಡುವುದು ಅಸಮಂಜಸವಾ? ಆಧ್ಯಾತ್ಮದ ಬಗ್ಗೆಯೂ ಹೀಗೇನಾ?

ನಮ್ಮ ಸೀಮಿತ ತಿಳುವಳಿಕೆಯಲ್ಲಿ ನಾವು ಕಂಡುಕೊಂಡ ಸತ್ಯವೆಂದರೆ, ಜ್ಞಾನಕ್ಕೆ ಮಿಗಿಲಾದ ಸಂಗತಿಯೊಂದಿದೆ. ನಮ್ಮೆಲ್ಲಾ ವ್ಯವಹಾರಕ್ಕೂ ಬುದ್ಧಿವಂತಿಕೆ, ಮೆದುಳಿನಲ್ಲಿ ಸಂಗ್ರಹಿತವಾದ ಮಾಹಿತಿ ಕೆಲಸಕ್ಕೆ ಬರುವುದಿಲ್ಲ. ತೀರಾ ತಾರ್ಕಿಕವಾಗಿ ಯೋಚಿಸುವ ನಮಲ್ಲಿ ಎಲ್ಲಾ ತರ್ಕಗಳನ್ನು ಕಿತ್ತೊಗೆಯುವಂತಹ ಭಾವನೆಗಳೂ ವಾಸವಾಗಿವೆ. ನಮ್ಮಲ್ಲಿ ರಸಾನುಭವದ ಸಾಮರ್ಥ್ಯವಿದೆ. ರಸಭರಿತವಾಗಿ ಬೆಳೆದು ಕೊಬ್ಬಿದ ದ್ರಾಕ್ಷಿಯನ್ನು ಸವಿಯುವುದಕ್ಕೆ ನಮಗೆ ಪಾಂಡಿತ್ಯದ ಅಗತ್ಯವಿಲ್ಲ. ಆದರೆ ಅದರ ಸವಿಯನ್ನು ಮತ್ತೊಬ್ಬನಿಗೆ ವರ್ಣಿಸಿ ಹೇಳುವಲ್ಲಿ, ಅದರ ಸವಿಯ ಬಗ್ಗೆ ‘ತಿಳಿಯುವುದರಲ್ಲಿ’ ಮಾತ್ರ ನಮ್ಮ ಪಾಂಡಿತ್ಯ, ತಿಳುವಳಿಕೆ, ಶಬ್ಧ ಕೌಶಲ ಬಳಕೆಗೆ ಬರುತ್ತವೆ. ಹಾಗೆ ಪಾಂಡಿತ್ಯ ಮೆರೆಯುವವನು ದ್ರಾಕ್ಷಿಯನ್ನು ತಿಂದಿರಲೇಬೇಕು ಎಂದೇನಿಲ್ಲ. ದ್ರಾಕ್ಷಿಯನ್ನು ಸವಿದವನಿಗಿಂಥ ರಸವತ್ತಾಗಿ ಆತ ವಿವರಣೆ ಕೊಡಬಲ್ಲ. ಏಕೆಂದರೆ ವಿವರಣೆಗೆ ಅಗತ್ಯವಾಗಿರುವುದು ಜ್ಞಾನ ಮಾತ್ರ. ಹಲವು ಸಲ ದ್ರಾಕ್ಷಿಯನ್ನು ಸವಿದವನು ಕೊಡುವ ವಿವರಣೆಗಿಂತ ನಮಗೆ ಪಂಡಿತನ ಜ್ಞಾನದ ಮೂಸೆಯಿಂದ ಹೊರಬಿದ್ದ ವಿವರಣೆಯೇ ರುಚಿಯೆನಿಸಿಬಿಡುತ್ತದೆ. ನಾವು ಎಡವುದೇ ಇಲ್ಲಿ. ನಮಗೆ ದ್ರಾಕ್ಷಿಯ ರುಚಿಯನ್ನು ಸವಿಯುವುದಕ್ಕಿಂತ ಹೆಚ್ಚಾಗಿ ಅದನ್ನು ಸವಿದವನ ಅನುಭವದ ವಿವರಣೆಯನ್ನು ಸವಿಯುದರಲ್ಲೇ ಆಸಕ್ತಿ ಹೆಚ್ಚಾಗಿಬಿಡುತ್ತದೆ.

ಆಧ್ಯಾತ್ಮದ ಬಗೆಗಿನ ಮಾತು ವ್ಯರ್ಥ. ಅದಕ್ಕಾಗಿಯೇ ‘ಅನುಭವ’ ಪಡೆದವರು ಮೌನಕ್ಕೆ ಶರಣಾಗುವುದು. ಏಕಾಂತಕ್ಕೆ ಹೋಗುವುದು. ನೀರು ಗಂಗಾಜಲವೇ ಆದರೂ ನಮ್ಮ ತಿಳುವಳಿಕೆಯ ಗಟಾರದಲ್ಲಿ ಹರಿದು ಒಳಬರುವಾಗ ಅದು ನಮ್ಮೊಳಗಿನ ಗಟಾರದ ನೀರೇ ಆಗಿಬಿಡುತ್ತದೆ. ಬಾವಿಯನ್ನು ಬಿಟ್ಟು ಹೊರಬರದ ಕಪ್ಪೆಗಳಿಗೆ ಸಮುದ್ರದ ವ್ಯಾಖ್ಯಾನ ಅರ್ಥವಾದ ಹಾಗೆ. ಇಷ್ಟೆಲ್ಲ ಗೊತ್ತಿದ್ದರೂ ಓಶೋ ಏಕೆ ಅವ್ಯಾಹತವಾಗಿ ಆ ಪರಿ ಮಾತಾಡಿದ?

ಬಹುಶಃ, ಮೌನವನ್ನು ಅರ್ಥ ಮಾಡಿಕೊಳ್ಳಲಾಗದ ನಮ್ಮಂಥವರ ಅಜ್ಞಾನದ ಮೇಲಿನ ಅನುಕಂಪದ ಮೇಲೇ ಇರಬೇಕು. ಆತನ ಮಾತುಗಳು ನಮ್ಮೊಳಗೆ ಇಳಿಯುತ್ತಾ ಇಳಿಯುತ್ತಾ, ಆತನ ಮಾತುಗಳೊಳಗಿನ ಮೌನ ನಮ್ಮಲ್ಲೂ ನೆಲೆಗೊಳ್ಳುತ್ತಾ ಹೋಗುತ್ತವೆಯೇನೋ? ಆತನ ಎತ್ತರಕ್ಕೆ ಏರುವುದಕ್ಕೆ ಮಾತುಗಳು ನಾವು ಬಳಸಬೇಕಾದ ಏಣಿಯೇನೋ!

‘ಬಿಸಿನೆಸ್ ಮ್ಯಾನ್’ ಓಶೋ ಬಗ್ಗೆ ಬಿಸಿ ಬಿಸಿ ಚರ್ಚೆ

ಬ್ಲಾಗುಗಳು ಕೊಡಮಾಡುವ ಈ ಆಯಾಮದಿಂದಾಗಿಯೇ ಅವುಗಳ ಯಶಸ್ಸಿನ ಗುಟ್ಟು ಅಡಗಿರುವುದು ಅನ್ನಿಸುತ್ತದೆಯೇನೋ! ಪತ್ರಿಕೆಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ ಮುಖವಿಲ್ಲದ ವ್ಯಕ್ತಿಗಳು ವ್ಯಕ್ತ ಪಡಿಸುವ ಅಭಿಪ್ರಾಯಗಳಿಗೆ ಸಿಕ್ಕದ ವೈಯಕ್ತಿಕ ಆಯಾಮ ಬ್ಲಾಗುಗಳಲ್ಲಿ ಸಿಗುತ್ತದೆ. ಚರ್ಚೆ ಸಂವಾದವಾಗಿ ರೂಪುಗೊಳ್ಳಲು ಆವಶ್ಯಕವಾದ ಅವಕಾಶವನ್ನು ಒದಗಿಸಿಕೊಡುತ್ತದೆ.

‘ಓಶೋ’ ಎಂಬ ಜಗತ್ತಿನ ಅತ್ಯಂತ ವಿವಾದಾಸ್ಪದ ಹಾಗೂ ಕುತೂಹಲಕರ ವ್ಯಕ್ತಿತ್ವದ ಬಗ್ಗೆ ಹೆಚ್ಚು ಹೆಚ್ಚು ಮಾತಾಡಿದಷ್ಟೂ, ಹೊಸ ಕೋನಗಳಿಂದ ಅವಲೋಕಿಸಿದಷ್ಟೂ ಹೆಚ್ಚಿನ ಸಹಾಯ ಸಿಕ್ಕುತ್ತದೆ. ಅಕ್ಕಾ ಚೇತನಾ ಶುರು ಮಾಡಿದ ಸಣ್ಣ ಚರ್ಚೆಗೆ ಬರೋಬ್ಬರಿ ಇಪ್ಪತ್ತೊಂದು ಪ್ರತಿಸ್ಪಂದನಗಳು ಬಂದಿರುವುದು ನಾವು ನಮ್ಮ ಪ್ರಯತ್ನವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿ.

ಈ ಸಂವಾದವನ್ನು ಕೇವಲ ಕಮೆಂಟು ಕಾಲಮ್ಮುಗಳ ಹರಟೆಗೆ ಸೀಮಿತಗೊಳಿಸಿದರೆ ಕಮೆಂಟಿಸಿದವರ ಆಸಕ್ತಿ ಹಾಗೂ ಪರಿಶ್ರಮಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂಬ ಉದ್ದೇಶದಿಂದ ಆಯ್ದ ಕಮೆಂಟುಗಳು ಹಾಗೂ ಅವುಗಳಲ್ಲಿನ ಮೆರಿಟ್ಟುಗಳನ್ನು ಗುರುತಿಸಿ ಒಂದು ಪೋಸ್ಟನ್ನು ಸಿದ್ಧ ಪಡಿಸಿದ್ದೇನೆ. ಹೆಚ್ಚಿನ ಸಂವಾದ ಈ ಕೊಂಡಿಯಲ್ಲಿ ನಡೆಯಲಿ ಎಂಬ ಉದ್ದೇಶದೊಂದಿಗೆ…

“ಓಶೋಗೆ ಭಾರತ ಅನಿವಾರ್ಯವಾಗಿತ್ತು. ಪಾಶ್ಚಾತ್ಯರ ಭಾರತದೆಡೆಗಿನ ಬೆರಗನ್ನು ಅವರು ಎನ್ ಕ್ಯಾಶ್ ಮಾಡಿಕೊಂಡರು. ಆ ಮಟ್ಟಿಗೆ ಓಶೋ ಅಪ್ಪಟ ಬಿಸಿನೆಸ್ ಮ್ಯಾನ್. ಅವರ ಪಾಲಿಗೆ ಭಾರತ ಮತ್ತು ಭಾರತೀಯ ತತ್ತ್ವಗಳು ಲಾಭದಾಯಕ ಮಾರಾಟದ ವಸ್ತುಗಳಾಗಿದ್ದವು” ಎಂಬ ಹೇಳಿಕೆಯಲ್ಲಿ ಹುರುಳಿದೆಯೇ ಎಂಬುದೇ ಚರ್ಚೆಯ ಮುಖ್ಯ ವಿಷಯವಾಗಿತ್ತು.

ಟೀನಾರವರು ಅದಕ್ಕೆ ಉತ್ತರಿಸಿದ್ದು ಹೀಗೆ:
ಓಶೋ ಒಂದು ಇಂಟರ್ಕಾಂಟಿನಲ್ ಸಬ್ಕಲ್ಚರನ್ನು ಹುಟ್ಟುಹಾಕಿದ್ದ phenomenon ಆಗಿದ್ದದ್ದು, ನಮ್ಮಂಥ ಸಾಮಾನ್ಯರಿಗೆ ಅವರ ರೀತಿನೀತಿಗಳ(ಹಾಗೇನಾದರು ಇದ್ದಿದ್ದಾದರೆ!!) ಕುತೂಹಲ ಇದ್ದದ್ದು ಕಾರಣ. ಅವ್ರ ಆಶ್ರಮದಲ್ಲಿ ಸುಮಾರು ವರುಷ ಕಳೆದ ಗೆಳೆಯ ಹರಿಯನ್ನ ಇವತ್ತಿಗೂ ಸುತ್ತಮುತ್ತಲವರು ಸುಲಭವಾಗಿ accept ಮಾಡುವದಿಲ್ಲ. ಓಶೋ ವಿಚಾರಧಾರೆ, ಅದರ ಬಗೆಗಿನ ಜನರ ಬತ್ತದ ಆಸಕ್ತಿ, ಇದೆಲ್ಲ ನನ್ನನ್ನ ಆತನ ಕೆಲವು ವಿಚಾರಗಳನ್ನ ಓದಲು ಪ್ರೇರೇಪಿಸಿತು. ನನಗೆ ಅರ್ಥವಾದಹಾಗೆ ಓಶೋ ಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದ್ದ ಆಧ್ಯಾತ್ಮವನ್ನ ಸರಳವಾಗಿ ಅರ್ಥೈಸಿ ಹೇಳಿದ ಹಲವರಲ್ಲೊಬ್ಬರು. ಆತನಿಗೆ ಜೀವನಪ್ರೀತಿ ಬಹಳ ಮುಖ್ಯವಾಗಿತ್ತು. ಆತ ತನ್ನ ಮಾತುಗಳನ್ನ ಹೇಳಲು ಆರಂಭಿಸಿದ ಕಾಲ ಕೂಡ ಇದಕ್ಕೆ ಪೂರಕವಾಯಿತು ಅನ್ನಬಹುದು. ಜನರಿಂದ ಇದಕ್ಕೆ ಬಂದ ಅದ್ಭುತ ರೆಸ್ಪಾನ್ಸು ಆತನನ್ನ ಗ್ಲೋಬಲೈಜ್ ಮಾಡಿತು. ಈಗ ಆರ್ಟ್ ಆಫ್ ಲಿವಿಂಗ್ ಇಲ್ಲವೆ ಹಾಗೆ. ಮುಂಚೆ ಆರ್ಟ್ ಆಫ್ ಲಿವಿಂಗ್ ಕೋರ್ಸು ಫ್ರೀಯಾಗಿದ್ದಾಗ ಅದನ್ನ ಕೇಳುವವ್ರೇ ಇರ್ಲಿಲ್ಲ. ಅದಕ್ಕೆ ಒಂದು ಬ್ರ್ಯಾಂಡ್ ನೇಮ್ ಬಂದಾಗ, ಅದಕ್ಕೆ ಫೀಸು ಹಾಕಿ ಅದು ಕೈಗೆಟಕುವುದು ಕಷ್ಟವಾದಾಗ ಜನ ಅದಕ್ಕೆ ಮುಗಿಬೀಳಲು ಆರಂಭಿಸಿದರು!! ಇದನ್ನ ಸಂಪೂರ್ಣವಾಗಿ ಬ್ಯುಸಿನೆಸ್ ಮೈಂಡೆಡ್ನೆಸ್ ಅನ್ನಲಿಕ್ಕೂ ಆಗದು. ಏಕೆಂದರೆ ಇದರಲ್ಲಿ ಓಶೋಗಿಂತ ಹೆಚ್ಚಾಗಿ ಓಶೋನ ಸುತ್ತಮುತ್ತ ಮುತ್ತುತ್ತಿದ್ದ ಜನರ ಕಾಂಟ್ರಿಬ್ಯುಶನ್ನು ಕೂಡ ಇದೆ.

ಓಶೋ ಬಗೆಗಿನ ಶಿಕಾಯತ್ತನ್ನು ಮತ್ತೊಮ್ಮೆ ವ್ಯಕ್ತ ಪಡಿಸಿದ ಮಯೂರರ ವಾದದ ಸಾರಂಶ ಹೀಗಿದೆ: The complaint I have against all these people who have cashed on Indian heritage/knowledge/culture, but refuse to call themselves as “Indians” is that they do not take pride in their heritage. It is only a tool to make money. This applies to OSHO and some of the other guys like Deepak Chopra, who are ripping off Indian knowledge, and making huge amounts money, but do not have requisite courage to call themselves Indians. On the other hand, they might be just shrewd marketers, who see the disadvantages of being labeled a Indian Guru.

ಮಯೂರರ ಕಂಪ್ಲೆಂಟಿಗೆ ನನ್ನ ಪ್ರತಿಕ್ರಿಯೆ:
ಓಶೋ ಭಾರತದ ಸಂಸ್ಕೃತಿ, ಪರಂಪರೆ, ಜ್ಞಾನದ ಪ್ರತಿನಿಧಿಯಾಗಿದ್ದವನಲ್ಲ ಹಾಗೂ ಆತ ಭಾರತದಿಂದ ಏನನ್ನೂ ತೆಗೆದುಕೊಂಡು ಅದನ್ನು ಮಾರ್ಕೆಟಿಂಗ್ ಮಾಡಲಿಲ್ಲ ಉದಾಹರಣೆಗೆ ಆರ್ಟ್ ಆಫ್ ಲಿಂವಿಂಗಿನ ಸುದರ್ಶನ ಕ್ರಿಯೆಯ ಮಾರ್ಕೆಟಿಂಗ್. ಆತ ತನ್ನ ಸಂನ್ಯಾಸಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ ಅದರಲ್ಲಿ ಜಗತ್ತಿನ ಎಲ್ಲಾ ದೇಶಗಳೂ ಬಂದು ಹೋಗಿವೆ. ವಸ್ತುನಿಷ್ಟವಾಗಿ ದೇಶಗಳನ್ನು ಹೊಗಳಿದ್ದಾನೆ, ಧರ್ಮಗಳನ್ನು ತೆಗೆಳಿದ್ದಾನೆ. ಆತನೇನು ವಿವೇಕಾನಂದರ ಹಾಗೆ ಭಾರತದ ಪರಂಪರೆಯ ರೂವಾರಿಯಾಗಿ ನಿಂತವನಲ್ಲ. ಆತ ಭಾರತದ ಮೆರಿಟ್‌ಗಳಿಗೆ ಅನುಗುಣವಾಗಿ ಭಾರತವನ್ನು ಹೊಗಳಿದ್ದಾನೆ. ಇನ್ನು ಅದರ ದಾರಿದ್ರ್ಯಗಳಿಗೆ ಮನಸಾರೆ ಬೈಯ್ದಿದ್ದಾನೆ.

ಆದರೂ ಮಯೂರರ ವಾದ ಹಾಗೂ ನನ್ನ ಪ್ರತಿಕ್ರಿಯೆಗಳು  ನಮಗೆ ಯಾವ ತೀರ್ಮಾನಗಳಿಗೆ ಬರಲೂ ಸಹಾಯವಾಗಲಿಲ್ಲ.

ಈ ಮಧ್ಯೆ ನಮ್ಮ ಚರ್ಚೆಯನ್ನು ಗಮನಿಸಿದ ಅನಭಿಯವರು ಹೀಗೆಂದು ಎಚ್ಚರಿಸಿದರು:  ಇಲ್ಲಿ ಓಶೋ ಚರ್ಚೆಗಳಿಗಿಂತ ಓಶೋನ ಹೋಲಿಕೆ, ಓಶೋ ಬಗ್ಗೆ ‘prejudice’ ಹೆಚ್ಚಾಗಿದೆ ಅನ್ನಿಸುತ್ತದೆ.
ವ್ಯಕ್ತಿಗಿಂತ ವಿಚಾರ ಮುಖ್ಯವಾದಾಗ, ಅದೊಂದು ಸುಂದರ ಆಸ್ವಾದನೆಯಾಗುತ್ತದೆ.

ಅವರ ಎಚ್ಚರಿಕೆಯನ್ನು ನಾನು ಅರ್ಥೈಸಿಕೊಂಡದ್ದು ಹೀಗೆ: ಓಶೋ ಬಗೆಗಿನ ನಮ್ಮ ‘prejudice’ಗಳನ್ನೇ ನಿವಾರಿಸಿಕೊಳ್ಳದೆ, ಆತನ ಬಗೆಗೊಂದು ಸ್ಪಷ್ಟವಾದ ನಿಲುವನ್ನು ಹೊಂದದೇ ಆತನ ವಿಚಾರಗಳ ಚರ್ಚೆ ನಡೆಸಲು ಹೊರಟರೆ ಅದರಲ್ಲಿ ನಾವು prejudiced ಆಗಿರುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು?

ಮುರಳಿಯವರು ಓಶೋನ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಹೀಗೆ ನಮ್ಮ ಮುಂದಿಟ್ಟರು: “osho is not anything all what we discuss he is just above all our understanding, he is the only enlightened person who choose to talk (all previous enlightened master choose silent).That is his greatest service to man kind, after krishna ,budda he is real soul who lived life full with awareness

ಸುನಾಥರು ಚರ್ಚೆಯ ಮುಖ್ಯ ಅಂಶವನ್ನು ಮತ್ತೆ ಮೇಲಕ್ಕೆ ತೆಗೆದು ತುಂಬಾ ನಿಖರವಾಗಿ ಹೇಳಿದ್ದು ಇಷ್ಟು:
ಓಶೋನ ಭಾರತೀಯತೆಯ ಬಗೆಗೆ. ಬುದ್ಧ, ಬಸವಣ್ಣ, ಪರಮಹಂಸರು ಇವರ್ಯಾರೂ ತಮ್ಮನ್ನು ಭಾರತೀಯ ಎಂದು ಗುರುತಿಸಿಕೊಂಡಿಲ್ಲ. ಓಶೋನಿಗೂ ಅದರ ಅವಶ್ಯಕತೆ ಇಲ್ಲ. Passport ಅನಿವಾರ್ಯವಾಗಿರುವ ಈ ದಿನಗಳಲ್ಲಿ, ಓಶೋ ಒಬ್ಬ Passport Indian ಅಷ್ಟೇ.
ಪ್ರಶ್ನೆ ಇರುವದು ಓಶೋ commercial guruವೇ ಎನ್ನುವದರ ಬಗೆಗೆ. ಬುದ್ಧ, ಬಸವಣ್ಣ, ಪರಮಹಂಸರು ಇವರ್ಯಾರೂ commercial guruಗಳಾಗಿರಲಿಲ್ಲ.
ಓಶೋನ ಪುಣೆ ಆಶ್ರಮದಲ್ಲಿ ಪ್ರವೇಶ ಯಾರಿಗೆ ದೊರೆಯುತ್ತಿತ್ತು ಎನ್ನುವದನ್ನು ಗಮನಿಸಿದರೆ, ಅವನ commercial mind ಗೊತ್ತಾಗುತ್ತದೆ.

ಚರ್ಚೆಯನ್ನು ಪ್ರಾರಂಭಿಸಿದ ಅಕ್ಕ ಚೇತನಾ ಚರ್ಚೆಯನ್ನು ಕೂಲಂಕುಷವಾಗಿ ಗಮನಿಸಿ ತಮ್ಮ ವಾದ ಹೀಗೆ ಮಂಡಿಸಿದರು:
ಈಗ ಅಸಲು ವಿಷಯ ಓಶೋ ಅಪ್ಪಟ ಬಿಸಿನೆಸ್ಮ ನ್ ಹೌದೋ ಅಲ್ಲವೋ ಅನ್ನುವುದಲ್ಲವೇ?
ಇರಲಿ. ಆತನೊಬ್ಬ ಬಿಸಿನೆಸ್ ಮನ್ ಅಂತಲೇ ಇಟ್ಟುಕೊಳ್ಳುವ. ಅದಕ್ಕಿಂತ, ಓಶೋ ಒಬ್ಬ ಅತ್ಯುತ್ತಮ ಸೇಲ್ಸ್ ಮನ್ ಅನ್ನೋದನ್ನಂತೂ ನಾವು ಒಪ್ಪಲೇಬೇಕು. ಅವರು ಭಾರತದ ಅತ್ಯುನ್ನತ ತತ್ವಗಳ ಮಾರ್ಕೆಟಿಂಗ್ ಮಾಡಿದರು. ಬಹಳ ಸ್ವಾರಸ್ಯಕರವಾದ ಮಾರ್ಗದಲ್ಲಿ,ಪಾಶ್ಚತ್ಯರಿಗೆ ಯಾವ ಮಾರ್ಗ ಪಥ್ಯವಾಗುವುದೋ ಅದೇ ಮಾರ್ಗದಲ್ಲಿ (ಶುಗರ್ ಕೋಟೆಡ್ ಪಿಲ್ಸ್ ನ ಹಾಗೆ) ನಿರೂಪಿಸಿದರು. ಆದರೆ ಆ ಮಾರ್ಗ ಕೇವಲ ಸಾಂದರ್ಭಿಕ ಮತ್ತು ನಿರ್ದಿಷ್ಟ ಸ್ಥಳಕ್ಕೆ, ಒಂದು ಸಣ್ಣ ಗುಂಪಿನ ಮನಸ್ಥಿತಿಗೆ ಮಾತ್ರ ಸರಿಹೊಂದುವಂಥದ್ದಾಗಿದ್ದರಿಂದ ಇಂದು ತನ್ನ ಸತ್ತ್ವ ಕಳೆದುಕೊಳ್ಳುವಂತಾಯಿತು.
ಅದಕ್ಕೇ, ಇವತ್ತು ಓಶೋ ವಿಚಾರಗಳು ಪ್ರಸ್ತುತವಾದರೂ ಓಶೋ ಮಾರ್ಗ ಅಪ್ರಸ್ತುತವಾಗಿರುವುದು. ಜನ ಅವರ ಸಿದ್ಧಾಂತ ಮರೆತು ಕೇವಲ ಓಶೋ ಜೀವನ, ವಿಧಾನಗಳ ಬಗ್ಗೆ ಮಾತ್ರ ಮಾತಾಡುವಂತಾಗಿರುವುದು.
ಅದೇನೇ ಇರಲಿ, ತಮ್ಮ ಮಾತಿನ ಕೌಶಲದಿಂದ ಓಶೋ ಅತ್ಯುನ್ನತ ತತ್ತ್ವಗಳನ್ನು ಜಗತ್ತಿಗೆ ತಲುಪಿಸಿದರು ಅನ್ನುವ ಸಂಗತಿ ಬಹಳ ಮುಖ್ಯ. ಆಯಾ ಕ್ಷೇತ್ರಗಳಲ್ಲಿ ಆಸಕ್ತಿ- ತಿಳುವಳಿಕೆ ಇರುವ salesmanಗಳು ಮತ್ರವೇ ನಿರ್ದಿಷ್ಟ ವಸ್ತುಗಳನ್ನು sale ಮಾಡಬಲ್ಲರು ಅಲ್ಲವೇ?
ಈ ನಿಟ್ಟಿನಲ್ಲಿಯಾದರೂ ನಾವು ಓಶೋರ ಅಪಾರ ಬುದ್ಧಿಮತ್ತೆ, ಚಿಂತನೆಗಳನ್ನು ಮೆಚ್ಚಲೇಬೇಕು. ಅವರ ಆಸಕ್ತಿಗೆ, ತಿಳುವಳಿಕೆಗೆ ಶರಣೆನ್ನಲೇಬೇಕು.

ಸಂತೋಷ್ ಅನಂತಪುರ ಹೇಳಿದ್ದು: ಪ್ರಸಕ್ತ ವರ್ತಕ ಯುಗದಲ್ಲಿ ಬೀಕರಿಗಿಲ್ಲದ್ದು ಯಾವುದಿದೆ ? ಎಲ್ಲವೂ ಕಾಂಚಾಣರೂಪಿಯೇ ಆಗಿರುವಾಗ ಇದು ಮಾತ್ರ ಅದರಿಂದ ಬೇರೆಯಾಗಿರಲು ಸಾಧ್ಯವೇನು? ಅಷ್ಟಕ್ಕೂ ‘ಕುಬೇರ’ ನಮ್ಮಲ್ಲಿರುವಾಗ!!!

ಇಷ್ಟೆಲ್ಲ ಓದಿಯೂ ನಮಗೆ ಓಶೋ ಹೇಗೆ ಕಾಣುತ್ತಾನೆ?
ಓಶೋನ ಭಾರತೀಯತೆಯನ್ನು ನಾವು ಹೇಗೆ ಅರ್ಥೈಸಿಕೊಂಡಿದ್ದೇವೆ?
ನಮ್ಮ ಪ್ರಜ್ಞೆಯ ಮಟ್ಟದಲ್ಲಿ ಆದರ್ಶಗಳಾಗಿ, ಸಮಾಜದ ರೀತಿ ನೀತಿಗಳಾಗಿ, ನೈತಿಕತೆಯಾಗಿ ಕಾಣುವುದು
ಪ್ರಜ್ಞಾ ಸ್ಥರದಲ್ಲಿ ನಮಗಿಂತ ಮೇಲೇರಿದವರ ಕಣ್ಣಲ್ಲಿ ಅಪ್ರಸ್ತುತ, ಅಪ್ರಬುದ್ಧವಾಗುತ್ತವೆಯಾ?
ಚರ್ಚಿಸಬಹುದಲ್ಲವೇ?

ನೋ ಜೋಕ್ಸ್ ಪ್ಲೀಸ್

‘ಓಶೋ ಎಂಬ ಹಕ್ಕಿ’ ಬ್ಲಾಗು ವರ್ಡ್‌ಪ್ರೆಸ್ಸಿನಲ್ಲಿ ಕಣ್ಣುತೆರೆಯುತ್ತಿದ್ದಂತೇ ಚೇತನಾ ಹಾಗೂ ಸುಪ್ರೀತ್ ಸ್ಪರ್ಧೆಗೆ ಬಿದ್ದವರ ಹಾಗೆ ಬರೆಯಲು ಶುರುಮಾಡಿಕೊಂಡು ಬಿಟ್ಟಿದ್ದಾರೆ. ಸಹ ಲೇಖಕನಾಗಿ ನನ್ನನ್ನು ಸೇರಿಸಿಕೊಂಡ ಅವರ ಧೈರ್ಯ ಹಾಗೂ ಸಾಹಸಕ್ಕೆ ಕೃತಜ್ಞತೆಯನ್ನು ಸಲ್ಲಿಸುವುದಕ್ಕಾಗಿಯಾದರೂ ನಾನು ಬರೆಯಬೇಕು.

ಓಶೋ ಎಂಬ ಜಗತ್ತಿನ ಅತ್ಯಂತ funny ಮನುಷ್ಯನ ಬಗ್ಗೆ ನಾವು ತುಂಬಾ ಸೀರಿಯಸ್ಸಾಗಿ ಯೋಚಿಸ್ತಿದ್ದೀವಿ ಅಂತ ನಾನೂ ತುಂಬಾ ಸಲ ಸೀರಿಯಸ್ಸಾಗಿ ಆಲೋಚಿಸಿದ್ದಿದೆ! ಸಹಜವಾಗಿ ತೇಲಿಬಂದ ಗಾಳಿಗೆ ತೊನೆಯುವ ಗಿಡದ ರೆಂಬೆಯನ್ನು ಕಂಡು ಪುಟ್ಟ ಮಗು ಕೈತಟ್ಟಿ ಸಂಭ್ರಮಿಸಿ ಕುಣಿಯುವುದನ್ನೂ ನಾವು ಜಗತ್ತಿನ ನಿಗೂಢಗಳಲ್ಲಿ ಒಂದು ಎಂದು ಭಾವಿಸುತ್ತೇವೆ. ಮಗುವಿನ ಮುಗ್ಧ ಸಂಭ್ರಮದ ಬಗ್ಗೆ ಪಾಂಡಿತ್ಯಪೂರ್ಣವಾದ ಪ್ರಬಂಧ ಬರೆದು ಎಂಥಾ ವಿಸ್ಮಯ ಅಂತ ಕೃತಕ ಅಚ್ಚರಿಯನ್ನು ನಟಿಸುವಾಗ ನಮಗೆ ನಾವು ಪಂಡಿತರಾಗುವ ಹಾದಿಯಲ್ಲಿ ಬಿಟ್ಟುಬಂದದ್ದು ಅದೇ ಮುಗ್ಧತೆಯನ್ನು ಎಂದು ಹೊಳೆಯುವುದಿಲ್ಲ. ಅದೇ ಗಾಳಿಗೆ, ಅದೇ ಗಿಡದ ಕೊಂಬೆ ತೊನೆಯುವುದನ್ನು ಕಂಡು ನಾವೂ ಕೇಕೆ ಹಾಕಿಕೊಂಡು ನಗಬಹುದು ಹಾಗೂ ಆ ರೀತಿ ನಗುವುದರಲ್ಲೇ ಜೀವ ಕಳೆ ಇರುವುದು ಎಂಬುದು ನಮಗೆ ತಿಳಿಯುವುದಿಲ್ಲ. ಅಬೋಧ ಮಗುವನ್ನು ಬಹುದೊಡ್ಡ ಗುರುವಾಗಿ ನಾವು ಕಂಡು ಬೆರಗಾಗುತ್ತೇವೆ!

ಯಾವ ಧರ್ಮ ಗುರುವಿನ ಉಪದೇಶದಲ್ಲಾದರೂ ನೀವು ಜೋಕುಗಳನ್ನು ಕೇಳಿದ್ದೀರಾ? ಯಾವುದೇ ದೇಶದ ತತ್ವಜ್ಞಾನಿಯೊಬ್ಬ ಎಲ್ಲರೊಡನೆ ಕುಣಿಯುತ್ತಾ, ಹಿನ್ನೆಲೆಯಲ್ಲಿ ಕೇಳುವ ವಾದ್ಯದ ತಾಳಕ್ಕೆ ಹೆಜ್ಜೆ ಹಾಕುತ್ತಾ ಅದನ್ನೇ ಧ್ಯಾನ ಎಂದದ್ದನ್ನು ನೋಡಿದ್ದೀರಾ? ‘ನಾನು ಹಾಸ್ಯಾಸ್ಪದವಾಗಿರಲಿಕ್ಕೆ ಸರ್ವ ರೀತಿಯಲ್ಲೂ ಸ್ವತಂತ್ರನು’ ಎಂದು ಘೋಷಿಸಿಕೊಂಡ ‘ಗುರು’ವಿನ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಯೇಸು ಕ್ರಿಸ್ತ ಹೇಳಿದ ಕಥೆಗಳನ್ನು ನೆನಪು ಮಾಡಿಕೊಳ್ಳಿ, ಬುದ್ಧನ ಉಪದೇಶಗಳನ್ನು ತಿರುವಿ ಹಾಕಿ, ಮೊಹಮ್ಮದ್ ಪೈಗಂಬರ್ ಹೇಳಿದ ‘ದೇವರ ಆದೇಶ’ಗಳನ್ನು ಕಿವಿಗೊಟ್ಟು ಕೇಳಿ, ವಿವೇಕಾನಂದರ ವೀರ ವಾಣಿಗೆ ಕಿವಿಯಾಗಿ ಅಲ್ಲೆಲ್ಲಾದರೂ ನಿಮಗೆ ಒಂದೇ ಒಂದು ಪೋಲಿ ಜೋಕು ಕಣ್ಣಿಗೆ ಬೀಳುತ್ತದಾ? ಇಲ್ಲ. ಅದಕ್ಕೇ ಓಶೋ ಎಲ್ಲರಿಗಿಂತ ಭಿನ್ನನಾಗಿ ಕಾಣುವುದು. ಆದರೆ ಭಿನ್ನತೆಯೇ ಆತನ ಸ್ವಂತಿಕೆಯಲ್ಲ ಅನ್ನೋದನ್ನ ಸ್ವಲ್ಪ ಸಮಯದಲ್ಲಿ ನಿಮಗೆ ಗೋಚರಿಸುವಂತೆ ಮಾಡುತ್ತಾನೆ ಆತ.

ಈ ಪುಟ್ಟ ಟಿಪ್ಪಣಿಯನ್ನು ಮುಗಿಸುವುದಕ್ಕೆ ಮುನ್ನ ಇತ್ತೀಚೆಗಷ್ಟೇ ಓದಿದ ಓಶೋನ ಉಪನ್ಯಾಸದಲ್ಲಿನ ಜೋಕನ್ನು ನೆನಪು ಮಾಡಿಕೊಳ್ಳಬಯಸುತ್ತೇನೆ. ಅವಳೊಬ್ಬ ಅಮೇರಿಕನ್ ಮಹಿಳೆ. ಹೊಸತಾಗಿ ಕ್ಯಾಥೋಲಿಕ್ ಧರ್ಮಕ್ಕೆ ಮತಾಂತರ ಗೊಂಡಿದ್ದಳು. ಹೊಸತಾಗಿ ಮತಾಂತರ ಗೊಂಡ ಕ್ರೈಸ್ತರ ಹುಮ್ಮಸ್ಸು ಬಹುದೊಡ್ಡದಿರುತ್ತದೆ. ಕಣ್ಣಿಗೆ ಕಂಡವರಿಗೆಲ್ಲಾ ಕ್ರಿಸ್ತನ ಶಿಲುಬೆ ತೊಡಿಸದಿದ್ದರೆ ಅವರಿಗೆ ಓದಿದ ಬೈಬಲ್ಲು ತಲೆಗೆ ಹತ್ತುವುದೇ ಇಲ್ಲ!

ಸರಿ ಒಮ್ಮೆ ನಗರದ ಪ್ರಖ್ಯಾತ ಚರ್ಚಿಗೆ ಕ್ರೈಸ್ತ ಧರ್ಮ ಗುರು ಪೋಪ್ ಭೇಟಿಕೊಡುತ್ತಾರೆ. ಈ ಮಹಿಳೆಯ ಹುಮ್ಮಸ್ಸು ಹಾಗೂ ಆಕೆ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡ ರೀತಿಯನ್ನು ಕೇಳಿತಿಳಿದು ಪೋಪ್‌ಗೆ ಅತೀವ ಸಂತೋಷವಾಗುತ್ತದೆ. ಆತನೊಂದಿಗೆ ಮಾತನಾಡಬಯಸಿದ ಆಕೆಗೆ ಅನುಮತಿಯನ್ನೂ ಕೊಡುತ್ತಾನೆ. ಈ ಮಹಿಳೆ ಪೋಪ್ ಬಳಿ ಮಾತಿಗೆ ನಿಲ್ಲುತ್ತಾಳೆ. ಅವರ ಕೋಣೆಯ ಹೊರಗೆ ನಿಂತಿದ್ದ ಭದ್ರತಾ ಸಿಬ್ಬಂದಿಗೆ ಪೋಪ್ ಆಕೆಯೊಂದಿಗೆ ಯಾವುದೋ ಗಾಢ ಚರ್ಚೆಯಲ್ಲಿ ಮಗ್ನನಾಗಿರುವಂತೆ ಕಾಣುತ್ತದೆ. ಇದನ್ನು ಕಂಡ ಪತ್ರಕರ್ತನೊಬ್ಬನಿಗೆ ಆಶ್ಚರುಅವಾಗುತ್ತದೆ. ಪೋಪ್ ಇಷ್ಟು ಹೊತ್ತು ಯಾರೊಂದಿಗೆ ಚರ್ಚೆ ನಡೆಸುತ್ತಿರಬಹುದು? ಏನೆಂದು ಮಾತುಕತೆ ನಡೆಯುತ್ತಿರಬಹುದು ಎಂದು ಆತ ಕುತೂಹಲಗೊಳ್ಳುತ್ತಾನೆ. ಆ ಹೆಣ್ಣಿನೊಂದಿಗೆ ಪೋಪ್ ಚರ್ಚಿಸುತ್ತಿರುವ ವಿಷಯವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ ಆತ ಕೋಣೆಯ ಬಳಿಗೆ ಬರುತ್ತಾನೆ. ಪೋಪ್ ದೀನ ಸ್ವರದಲ್ಲಿ ಆ ಹೆಣ್ಣಿಗೆ ಹೇಳುತ್ತಿರುತ್ತಾನೆ, ‘ತಾಯಿ ನನ್ನನ್ನು ಬಿಟ್ಟು ಬಿಡು ನಾನು ಈಗಾಗಲೇ ಕ್ಯಾಥೋಲಿಕ್ ಆಗಿದ್ದೇನೆ.’

ಇಲ್ಲಿರುವ ಒಂದು ಧರ್ಮ ಹಾಗೂ ಧಾರ್ಮಿಕ ಸಂಗತಿಗಳ ಉಲ್ಲೇಖ ಕೇವಲ ಸಾಂಕೇತಿಕ. ಯಾವ ಧರ್ಮಕ್ಕಾದರೂ ಇದು ಅನ್ವಯವಾಗುತ್ತದೆ. ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಗಂಭೀರವಾಗುವವರೇ ಜಗತ್ತಿನಲ್ಲಿ ಹೆಚ್ಚು. ಜೋಕನ್ನೂ ಗಂಭೀರವಾಗಿ ಪರಿಗಣಿಸುವುದು ಅವರ ಕರ್ಮ!

ಓಶೋ ಎಂಬ ಅಪ್ಪಟ business man…

ಓಶೋರ ಭಾರತ ಪ್ರೀತಿ ಅದೆಷ್ಟು ಸಾಚಾ?
ಇಂಥದೊಂದು ಪ್ರಶ್ನೆ ನಮ್ಮ ಮುಂದೆ ಬಂದು ನಿಂತಿದೆ.

“ಓಶೋಗೆ ಭಾರತ ಅನಿವಾರ್ಯವಾಗಿತ್ತು. ಪಾಶ್ಚಾತ್ಯರ ಭಾರತದೆಡೆಗಿನ ಬೆರಗನ್ನು ಅವರು ಎನ್ ಕ್ಯಾಶ್ ಮಾಡಿಕೊಂಡರು. ಆ ಮಟ್ಟಿಗೆ ಓಶೋ ಅಪ್ಪಟ ಬಿಸಿನೆಸ್ ಮ್ಯಾನ್. ಅವರ ಪಾಲಿಗೆ ಭಾರತ ಮತ್ತು ಭಾರತೀಯ ತತ್ತ್ವಗಳು ಲಾಭದಾಯಕ ಮಾರಾಟದ ವಸ್ತುಗಳಾಗಿದ್ದವು”- ಎನ್ನಲಾಗುತ್ತಿದೆ.
ಭಾರತ, ಅಧ್ಯಾತ್ಮ, ವೇದೋಪನಿಷತ್ತುಗಳ ಬಗ್ಗೆ ಹೇಳುತ್ತಲೇ ಗಾಂಝಾ, ಅಫೀಮು, ಕ್ಲಬ್ಬುಗಳಲ್ಲಿ ತೊಡಗಿಕೊಂಡು ಶ್ರೀಮಂತ ಬದುಕು ನಡೆಸಿದ ರಜನೀಶ್ ಒಂದು ಆದರ್ಶವಾಗಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಅವರದು.

ಇದರೊಂದಿಗೆ, ಓಶೋ ಎಂಬ ಹಕ್ಕಿಯ ಚಿಲಿಪಿಲಿ ಶುರುವಾಗುತ್ತಿದೆ. ಚರ್ಚೆಗಿಲ್ಲಿ ಮುಕ್ತ ಅವಕಾಶವಿದೆ.

ರೆಕ್ಕೆ ಬಿಚ್ಚಿ, ಆಕಾಶವನ್ನು ನೆಚ್ಚಿ…

ಓಶೋರಜನೀಶ್ ಚಂದ್ರ ಮೋಹನ್ ಎಂಬ ವ್ಯಕ್ತಿಯನ್ನು ಜಗತ್ತು ನೂರಾರು ಹೆಸರುಗಳಿಂದ ಕರೆದಿದೆ. ತಮಗೆ ಕಂಡ ಆತನ ಮುಖಕ್ಕೆ ತಮಗೆ ತೋಚಿದ ಹೆಸರನ್ನು ಜನರು ಕೊಡುತ್ತಾ ಬಂದಿದ್ದಾರೆ. ಆದರೆ ಕ್ಷಣ ಕ್ಷಣಕ್ಕೂ ಹೊಸ ಮುಖಗಳನ್ನು ಅನಾವರಣಗೊಳಿಸುತ್ತಾ ಹೋಗುವ, ಹೆಚ್ಚು ಹೆಚ್ಚು ಆಳಕ್ಕಿಳಿದಷ್ಟು ಹೊಸ ಆಯಾಮಗಳಲ್ಲಿ ತೆರೆದುಕೊಳ್ಳುತ್ತಾ ಹೋಗುವ ಆ ವ್ಯಕ್ತಿಯ ಎದುರು ಜಗತ್ತಿನ ಹೆಸರುಗಳೆಲ್ಲಾ ಕಳಾಹೀನವಾಗಿವೆ. ಆತನನ್ನು ಹಿಡಿದಿಡುವಲ್ಲಿ ಅಕ್ಷರಗಳ ಪುಂಜಗಳು ಸೋತಿವೆ. ಆತನನ್ನು ಆಚಾರ್ಯ ಎಂದು ಕರೆದರು, ಭಗವಾನ್ ಎಂದು ಸಂಬೋಧಿಸಿದರು. ಓಶೋ ಎಂದು ಕೂಗಿದರು. ಸೆಕ್ಸ್ ಗುರು ಎಂದು ಗೇಲಿ ಮಾಡಿದರು. ರಾಲ್ಸ್ ರಾಯ್ಸ್ ಸನ್ಯಾಸಿ ಎಂದು ಬಿರುದುಕೊಟ್ಟರು, ಡೈಮಂಡ್ ವಾಚಿನ ಬುದ್ಧ ಎಂದು ಕರೆದು ನಕ್ಕರು, ಭಗವಂತ ಎಂದು ಪಾದಕ್ಕೆರಗಿದರು, ಮಾನಸಿಕ ಅಸ್ವಸ್ಥ ಎಂದು ತೀರ್ಪುಕೊಟ್ಟರು. ಆದರೆ ಯಾವುದಂದರೆ ಯಾವುದಕ್ಕೂ ನಿಲುಕದೆ ಸ್ವಚ್ಛಂದವಾಗಿ ಆತ ಹಾರಾಡುತ್ತಲೇ ಇದ್ದ. ಅದಕ್ಕಾಗಿಯೇ ಆತನನ್ನು ನಾನು ಹಕ್ಕಿ ಎಂದಿರುವುದು.

ಹಕ್ಕಿ ಹಾರುವುದನ್ನು ಗಮನಿಸಿದ್ದೀರಾ? ಕಣ್ಣಿಗೆ ಕಾಣದಷ್ಟು ತೆಳುವಾದ ಗಾಳಿಯನ್ನು ಒತ್ತಿ ರೆಕ್ಕೆ ಬಿಚ್ಚಿ ಹಾರುವುದು ಸುಲಭದ ಮಾತಲ್ಲ. ಆಕಾಶವೇನೋ ಸ್ವಚ್ಛಂದವಾಗಿದೆ. ವಿಶಾಲವಾಗಿ ವ್ಯಾಪಿಸಿದೆ. ಆದರೆ ರೆಕ್ಕೆ ಬಿಚ್ಚಿ ಕಣ್ಣು ಮುಚ್ಚಿಕೊಂಡು ನೆಗೆಯುವ ಹಕ್ಕಿ ತನ್ನೆಲ್ಲಾ ಅನವಶ್ಯಕ ಭಾರವನ್ನು ಕಳಚಬೇಕಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಬೆತ್ತಲಾಗಬೇಕಾಗುತ್ತದೆ. ಎಲ್ಲಿವರೆಗೆ ಸಾಧ್ಯವೋ ಅಲ್ಲಿಯವರೆಗೆ ಎಲ್ಲಾ ಮೋಹಗಳನ್ನು ತೊರೆಯಬೇಕಾಗುತ್ತದೆ. ತನ್ನದೆಂದುಕೊಂಡ ಎಲ್ಲವನ್ನೂ ಬಿಟ್ಟು ಹೊರಡಬೇಕಾಗುತ್ತದೆ. ಪಾಂಡಿತ್ಯ, ಪುಸ್ತಕ ಜ್ಞಾನ, ಶಬ್ಧ ಸಂಪತ್ತು, ನೈಪುಣ್ಯತೆ, ಬುದ್ಧಿವಂತಿಕೆ ಎಲ್ಲವನ್ನೂ ನೆಲದ ಮೇಲೇ ಬಿಸುಟು ಹಾರಬೇಕಾಗುತ್ತದೆ. ಗಳಿಸಿಕೊಂಡ ಸಂಪತ್ತು, ಹೆಸರು, ಪ್ರತಿಷ್ಠೆ, ಆದರ್ಶ, ನೈತಿಕತೆ, ಜನಬೆಂಬಲ ಎಲ್ಲವನ್ನೂ ಮರೆತು ನೆಗೆಯಬೇಕಾಗುತ್ತದೆ. ರೆಕ್ಕೆಯನ್ನು ನಂಬಿಕೊಂಡು ಆಗಸಕ್ಕೆ ಹಾರುವ ಹಕ್ಕಿಗೆ ಭಾರ ಕಡಿಮೆಯಾದಷ್ಟು ಸ್ವಾತಂತ್ರ್ಯ ಹೆಚ್ಚಾಗುತ್ತದೆ. ಹೀಗೆ ಹಕ್ಕಿಯ ಹಾಗೆ ಬದುಕಿದವನು ಓಶೋ.

ಈ ಬ್ಲಾಗಿಗೆ ‘ಓಶೋ ಎಂಬ ಹಕ್ಕಿ’ ಎಂದು ಹೆಸರು ಕೊಟ್ಟದ್ದರ ಹಿಂದೆ ಇಷ್ಟೆಲ್ಲಾ ಯೋಚಿಸಿದ್ದೆನಾ? ಖಂಡಿತಾ ಇಲ್ಲ. ಅದು ಕಣ್ಣೆದುರಿಗೆ ದಿಗಂತದವರೆಗೆ ಹಬ್ಬಿ ಅಂತ್ಯವನ್ನೇ ಮರೆಯಾಗಿಸಿದ ಜಲಸಾಗರವನ್ನು ಕಂಡು ‘ಅಬ್ಬಾ’ ಎಂದಷ್ಟೇ spontaneous ಆಗಿ ತೋಚಿದ ಹೆಸರು. ಓಶೋ ಭಜನೆ ಬ್ಲಾಗಿನ ಉದ್ದೇಶವಾಗಿದ್ದರೆ ಇದರ ಹೆಸರು ‘ಜಗದ್ಗುರು ಓಶೋ ರಜನೀಶ್’ ಎಂದಾಗಿರುತ್ತಿತ್ತು. ಇಲ್ಲವೇ ಅರೆಬೆಂದ ಮಾಹಿತಿಯ ಪ್ರಚಾರವೇ ನಮ್ಮ ಉದ್ದೇಶವಾಗಿದ್ದರೆ ‘ಸೆಕ್ಸ್ ಗುರು ರಜನೀಶ್’ ಎಂಬ ಹೆಸರು ಕೊಡುತ್ತಿದ್ದೆವು. ಬ್ಲಾಗಿನ ಹೆಸರಿನಷ್ಟೇ spontaneous ಆದ, ರಜನೀಶ್ ವಿಚಾರದೊಂದಿಗೆ ಮುಖಾಮುಖಿಯಾದಾಗ ಆ ಕ್ಷಣದಲ್ಲಿ ಹುಟ್ಟಿದ ಆಲೋಚನೆಯನ್ನು, ಭಾವವನ್ನು ಹರಿಬಿಡುವುದು ಇದರ ಉದ್ದೇಶ. ಆ ಕ್ಷಣದಲ್ಲಿ ನಮ್ಮಲ್ಲಿ ಹುಟ್ಟಿದ ಭಾವವಷ್ಟೇ ಸತ್ಯ. ನಮ್ಮ ಮನಸ್ಸಿನಲ್ಲಿ ಮೂಡಿನಿಂತ ಚಿತ್ರಣವೇ ಸತ್ಯ. ಉಳಿದದ್ದೆಲ್ಲವೂ ನಮ್ಮ interpretationಗಳು ಮಾತ್ರ.

ಓಶೋನ ಗೀಳು ಹತ್ತಿಸಿಕೊಂಡ ನನಗೆ ಓಶೋ ಕಾಣಿಸಿದ ಸಂಗತಿಗಳು, ನನ್ನ ಮೇಲೆ ಓಶೋನ ಪ್ರಭಾವ ಮಾಡಿದ ಪರಿಣಾಮಗಳು, ಓಶೋನ ಚಿಂತನೆಯಿಂದ ನಾನು ಅನುಭವಿಸಿದ ಹಿಂಸೆ ಎಲ್ಲವನ್ನೂ ನಾನು ಈ ಬ್ಲಾಗಿನ ಅಂಗಳದಲ್ಲಿ ಕೂತು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇನ್ನುಳಿದ ಹಾಗೆ ಅಕ್ಕ ಚೇತನಾ ಇದ್ದಾಳೆ, ವೆಂಕಟೇಶ್ ಇದ್ದಾರೆ, ಅನಾಮಿಕತೆಯಲ್ಲೇ ಐಡೆಂಟಿಟಿ ಕಂಡುಕೊಳ್ಳಬಯಸುವ ‘ನಗೆ ಸಾಮ್ರಾಟ’ರು ಇದ್ದಾರೆ ನಮ್ಮ ಅಂಗಳದಲ್ಲಿ. ಜೊತೆಗೆ ಸಾಕಷ್ಟು ಬೆಳದಿಂಗಳೂ ಚೆಲ್ಲಿಕೊಂಡಿದೆ. ನೀವೂ ಬಂದುಬಿಡಿ ಹಾಯಾಗಿ ಮೌನದಲ್ಲಿ ಮಾತನಾಡುತ್ತಾ, ಮಾತಿನಲ್ಲಿ ಮೌನವನ್ನು ಕೇಳುತ್ತಾ ವಿಹರಿಸೋಣ…

ಓಶೋ ಎಂಬ ‘ಹಕ್ಕಿ’?

ಓಶೋ ಕುರಿತ ಈ ಬ್ಲಾಗಿಗೆ ಸುಪ್ರೀತ ‘ಓಶೋ ಎಂಬ ಹಕ್ಕಿ’ ಎಂದ್ಯಾಕೆ ಶೀರ್ಷಿಕೆ ಕೊಟ್ಟ?
ಹಾಗಂತ ನಾನವನನ್ನ ಕೇಳಲಿಲ್ಲ. ಆದರೆ ನನಗೆ ಆ ಹೆಸರು ಸಮಂಜಸ ಅನಿಸಿದ್ದು ಹೌದು.

ಹಕ್ಕಿ ಅಂದರೆ ಹಗುರ.
ಹಕ್ಕಿ ಅಂದರೆ ಸ್ವತಂತ್ರ.
ಹಕ್ಕಿ ಅಂದರೆ ಸ್ವಚ್ಚಂದ.

ಹಾಗೇ,

ಓಶೋ ವಿಚಾಗಳ ನಿರೂಪಣೆ ಅತ್ಯಂತ ಹಗುರ. ಅಲ್ಲೇನೂ ನಿಮಗೆ ಮುಖ ಗಂಟಿಕ್ಕಿದ ಭಾರ ಭಾರದ ಪದಪುಂಜಗಳು ನಿಮ್ಮನ್ನ ಕಾಡಿಸಲಾರವು. ಅವರ ಮಾತಿನ ಶೈಲಿ ನಿಮ್ಮ ತಲೆಗೆ ಯಾವತ್ತೂ ಹೊರೆ ಅನಿಸದು.

ಓಶೋ ವಿಚಾರಗಳು ಮುಕ್ತ. ಅಲ್ಲಿ ಮಡಿವಂತಿಕೆಯಿಲ್ಲ. ನೀವು ಯಾವುದೇ ಪ್ರಶ್ನೆ ಕೇಳಿಯೂ ಅಲ್ಲಿಂದ ಉತ್ತರ ಪಡೆಯಬಹುದು. ಈ ಕಾರಣಕ್ಕೇ ಕೆಲವೊಮ್ಮೆ ಅಲ್ಲಿ ವಿರೋಧಾಬಾಸಗಳು ತೋರುತ್ತವೆಯೆಂಬುದೂ ನಿಜ.

ಓಶೋ ಚಿಂತನೆಗಳು ಎಲ್ಲರನ್ನೂ ಎಲ್ಲವನ್ನೂ ಒಳಗೊಂಡಿದ್ದೂ ಸ್ವತಂತ್ರ. ಬುದ್ಧ ಹೇಳಿದ, ಮಹಾವೀರ ಹೇಳಿದ, ತ್ಸಾವೋ ಹೇಳಿದ, ಝೆನ್ ಪರಂಪರೆ ಹೇಳಿದ್ದನ್ನೇ ಹೇಳಿದರೂ ಓಶೋ ಮೂಲಕ ಅವು ಬಂದಾಗ ತಾಜಾ ಎನಿಸುವುದು ಈ ಕಾರಣಕ್ಕೇ.

ಓಶೋ ಬಗ್ಗೆ ಸಾಕಷ್ಟು ದೂರುಗಳಿವೆ. ತಕರಾರುಗಳೂ ಆರೋಪಗಳೂ ಇವೆ. ಅಷ್ಟೆಲ್ಲದರ ನಡುವೆಯೂ ಓಶೋ ಭಿನ್ನವಾಗಿ ನಿಲ್ಲುತ್ತಾರೆಂದರೆ ಅದಕ್ಕೆ ಕಾರಣ ಅವರ ಸರ್ವ ಧರ್ಮ ಸಮನ್ವಯ ಭಾವ.

ನನಗೆ ಓಶೋ ಇಷ್ಟವಾಗೋದು ಭಾರತದೆಡೆಗಿನ ಉತ್ಕಟ ಪ್ರೀತಿಯಿಂದಾಗಿ.  ಅವರ ನೇರವಂತಿಕೆ, ನಿರ್ಭಿಡೆಯ ನಡೆ- ನುಡಿಗಳು ನನ್ನನ್ನು, ಎಂಥವರನ್ನೂ ತಟ್ಟುತ್ತವೆ.

ಅಂತೂ ನಮ್ಮ ಓಶೋ ಬ್ಲಾಗು ವರ್ಡ್ ಪ್ರೆಸ್ಸಿನಲ್ಲಿ ಶುರುವಾಗಿದೆ. ಆದರೆ ಇದರ ಸ್ವರೂಪ ಹೇಗಿರಬೇಕು? ಚರ್ಚೆ ಹೇಗೆಲ್ಲ ಸಾಗಬೇಕು ಅನ್ನುವುದೆಲ್ಲ ಇನ್ನಷ್ಟೆ ನಿರ್ಧಾರವಾಗಬೇಕಿದೆ. ಇದಕ್ಕೆ ಅತಿ ಮುಖ್ಯವಾಗಿ ಬೇಕಾಗೋದು ನಿಮ್ಮೆಲ್ಲರ ಸಹಕಾರ. ಓಶೋ ಕುರಿತ ಸಂವಾದದಲ್ಲಿ ನೀವೂ ಭಾಗಿಗಳಾಗಿ. ನಿಮ್ಮ ಸಮ್ಮತಿ, ಅಸಮ್ಮತಿಗಳನ್ನು ನೇರವಾಗಿ ಹಂಚಿಕೊಳ್ಳಿ.

ನಾವು ಕಾದಿದ್ದೇವೆ.

ಚೇತನಾ